ಗಂಗಾವತಿ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ಪಿಪಿ ಪಕ್ಷ ಗೆಲ್ಲುವ ಮೂಲಕ ಬಸವಾದಿ ಶರಣರು ಕಂಡ ರಾಜ್ಯದ ಕನಸನ್ನು, ನನಸು ಮಾಡಲು ಮುನ್ನುಡಿ ಬರೆದಿದೆ ಎಂದು ಕೆಆರ್ಪಿಪಿ ರಾಜ್ಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ನಗರದ ಕನಕಗಿರಿ ರಸ್ತೆಯಲ್ಲಿನ ಕೆಆರ್ಪಿಪಿ ಕಚೇರಿಯಲ್ಲಿ ಈಚೆಗೆ ನಡೆದ ಯುವ ಘಟಕದ ಪ್ರಥಮ ಕಾರ್ಯಾಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗಾವತಿ ಜನತೆಯ ಆಶೀರ್ವಾದವೇ ಇಲ್ಲಿನ ಕೆಆರ್ಪಿಪಿ ಗೆಲುವು. ಚುನಾವಣೆ ವೇಳೆ ಜನಾರ್ದನರೆಡ್ಡಿ ಜನತೆಗೆ ಸಾಕಷ್ಟು ಅಭಿವೃದ್ಧಿ ಭರವಸೆಗಳು ನೀಡಿದ್ದು, ಎಲ್ಲವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಈಡೇರಿಸಲಿದ್ದಾರೆ. ಗಂಗಾವತಿ ಅಭಿವೃದ್ಧಿ ಹೆಸರಿನಲ್ಲಿ ಹಿಂದಿನವರೂ ಲೂಟಿ ಹೊಡೆದಿದ್ದಾರೆ ಎಂದು ಹೇಳಿದರು.
ಕೆಆರ್ಪಿಪಿ ಯುವ ಘಟಕದ ಪದಾಧಿಕಾರಿಗಳು ನಗರ ಮತ್ತು ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕಷ್ಟಕ್ಕೆ ನೆರವಾಗಬೇಕು. ಕೆಆರ್ಪಿಪಿಗೆ ಯುವ ಜನತೆಯೇ ಶಕ್ತಿ. ಮುಂದಿನ ದಿನಗಳಲ್ಲಿ ಯುವಜನತೆಗೆ ಕೆಆರ್ಪಿಪಿ ಹೆಚ್ಚಿನ ರಾಜಕೀಯ ಅವಕಾಶಗಳು ಒದಗಿಸಲಿದೆ ಎಂದರು.
ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ ರೆಡ್ಡಿ, ಜಿಲ್ಲಾಧ್ಯಕ್ಷ ಮನೋಹರ ಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರು ಹಿರಿಯೂರು, ನಗರಾಧ್ಯಕ್ಷ ವಿರೇಶ ಬಲಕುಂದಿ, ನಗರ ಯುವ ಘಟಕದ ಅಧ್ಯಕ್ಷ ರಮೇಶ ಹೊಸ ಮಲಿ, ಪ್ರಧಾನ ಕಾರ್ಯದರ್ಶಿ ಮಣಿಕಂಠ ರೆಡ್ಡಿ ಸೇರಿದಂತೆ ಪದಾಧಿಕಾರಿಗಳು ಇದ್ದರು.