ಕುಷ್ಟಗಿ (ಕೊಪ್ಪಳ ಜಿಲ್ಲೆ): ಪಟ್ಟಣದ ವಿವಿಧ ವಾರ್ಡುಗಳಲ್ಲಿ ಗುರುವಾರ ಸಂಜೆ ಹುಚ್ಚುನಾಯಿಯೊಂದು ಮಕ್ಕಳು ಸೇರಿ 12 ಜನರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಏಕಾಏಕಿ ದಾಳಿಯಿಂದ ಜನರು ಬಚಾವಾಗಲು ಪರದಾಡಿದ್ದಾರೆ. ಆದರೂ ನಾಯಿ ಕೆಲವರನ್ನು ಮನ ಬಂದಂತೆ ಕಚ್ಚಿದೆ. ಮಗುವೊಂದರ ಕೆನ್ನೆಯ ಭಾಗ ಕಿತ್ತು ಬಂದಿದೆ. ಇತರರ ಕೈ, ಕಾಲುಗಳ ಬಳಿ ಕಚ್ಚಿ ಗಾಯಗೊಳಿಸಿದ್ದು, ಗಾಯಾಳುಗಳನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ರೇಬಿಸ್ ರೋಗ ನಿರೋಧಕ ಔಷಧದ ಮೂಲಕ ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಯಿ ದಾಳಿಯಿಂದ ಕಂಗೆಟ್ಟ ಜನರು ಅದನ್ನು ಅಟ್ಟಾಡಿಸಿ ನಂತರ ಹೊಡೆದು ಸಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ನಾಯಿ ಪ್ರಾಣಿಗಳನ್ನೂ ಕಚ್ಚಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರು ಮಾಹಿತಿ ಪಡೆದರು.