ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದಲ್ಲಿ ದುರ್ಗಾದೇವಿಯ ಜಾತ್ರೆಯ ಅಂಗವಾಗಿ ಬುಧವಾರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.
ದೇವತೆಗಳ ಜಾತ್ರೆ ಅಂದರೆ ಕುರಿ, ಕೋಣೆ ಬಲಿಕೊಡುವ ಸಂಪ್ರದಾಯ ಸಹಜ. ಆದರೆ ಈ ಗ್ರಾಮದ ಜಾತ್ರೆಯಲ್ಲಿ ಯಾವ ಪ್ರಾಣಿಗಳ ಬಲಿ ಇಲ್ಲದ ಜಾತ್ರೆ ನಡೆಯುತ್ತದೆ. ಗ್ರಾಮದ ದೇವಿಯ ತವರು ಗೋರವರ ಮನೆಯಲ್ಲಿ ಉಡಿ ತುಂಬಿಸಿಕೊಂಡು ಊರಿನ ಎಲ್ಲಾ ವರ್ಗದ ಮನೆಗೆ ತೆರಳಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಜಾತ್ರೆಗೆ ಹಣ ಸಂಗ್ರಹಿಸಲಾಗುತ್ತದೆ. ಗೊರವರ ಮನೆ ತವರ ಮನೆಯಾಗಲು, ದೇವತೆಯು ಬೆಟಗೇರಿ ಬರುವುದಕ್ಕಿಂತ ಮುಂಚೆ ಗಜೇಂದ್ರಗಡದಲ್ಲಿ ಇದ್ದಳು ಎಂಬ ಪ್ರತೀತಿ ಇದೆ.
ಬೇಟಗೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನ ತನ್ನದೇ ಆದ ಪುರಾಣ ಹೊಂದಿದೆ. ಗ್ರಾಮದ ಮೈಲಾರಲಿಂಗನ ದೇವಸ್ಥಾನದ ಎದುರಿನ ಬೇವಿನ ಸಸಿಯಲ್ಲಿ ದೇವಿ ನೆಲೆಸಿದ್ದಾಳೆ ಎಂದು ಭಕ್ತರು ನಂಬುತ್ತಾರೆ. ಪ್ರಸ್ತುತ ಎರಡು ಗುಡಿಗಳು ಒಂದೇ ಆವರಣದಲ್ಲಿದ್ದು, ಗರ್ಭಗುಡಿ ಮಾತ್ರ ಬೇರೆ ಬೇರೆ ಇವೆ. ದುರ್ಗಾದೇವಿಯನ್ನು ಗಡೇದ ದುರ್ಗಮ್ಮ ಎಂದೂ ಕರೆಯಲಾಗುತ್ತದೆ.
ಜಾತ್ರೆ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ.1ರಿಂದಲೇ ಆರಂಭಗೊಂಡಿದ್ದು, ಏ.3 ಬುಧವಾರದೇವಿಗೆ ವಿಶೇಷ ಪೂಜೆ, ಸಾಯಂಕಾಲ ಧ್ವಜಾರೋಹಣದ ನಂತರ ದುರ್ಗಾದೇವಿ ರಥೋತ್ಸವ ನೆರವೇರಿಲಿದೆ. ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಕನೂರ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
4 ರಂದು ಮದ್ದು ಸುಡುವುದು, ಕಡುಬಿನ ಕಾಳಗ ಕಾರ್ಯಕ್ರಮ ನಡೆಯಲಿದೆ. ಸಂಜೆ ಭಕ್ತ ಹಿತಚಿಂತನಾ ಸಭೆಯು ನಂದಿಪುರದ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದ್ದು, ಸಿದ್ದಲಿಂಗೇಶ ಸಜ್ಜನ್ ಶೆಟ್ಟರ್ ಭಾಗವಹಿಸುವರು. ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಅವರಿಂದ ಜಾನಪದ ಸಂಜೆ ಕಾರ್ಯಕ್ರಮ ನಡೆಯಲಿದೆ. ರಕ್ತದಾನ ಶಿಬಿರ, ನಾಟಕ, ಬಯಲಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಆದಿಶಕ್ತಿ ಜಾತ್ರೆಯ ಅಂಗವಾಗಿ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ಧು, ಪ್ರತಿಯೊಬ್ಬರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಟಗೇರಿಯ ದುರ್ಗಾದೇವಿ ದೇವಸ್ಥಾನವು ಇತಿಹಾಸ ಪ್ರಸಿದ್ಧಿ ಪಡೆದಿದೆ. ಸರ್ವ ಧರ್ಮದವರು ಜಾತ್ರಾ ಮಹೋತ್ಸವದ ಭಾಗಿಯಾಗಿತ್ತಾರೆ. ಸುತ್ತ ಮುತ್ತಲಿನ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು
-ವೀರೇಶ್ ಸಜ್ಜನ ಗ್ರಾಮದ ಮುಖಂಡ
ಬೆಟಗೇರಿ ಗ್ರಾಮದ ಆರಾಧ್ಯ ದೈವ ದುರ್ಗಾದೇವಿ ಜಾತ್ರೆಯು ಹರಗುರು ತ್ರಿಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಭಕ್ತರ ಇಷ್ಟಾರ್ಥ ಈಡೇರಿಸುವ ದುರ್ಗಾದೇವಿ ಜಾತ್ರೆ ನಾಲ್ಕು ದಿನಗಳು ನಡೆಯಲಿದೆ.
-ಹನುಮ ರೆಡ್ಡಿ ಬೆಲ್ಲಡಗಿ ಗ್ರಾಮದ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.