ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಸಮೀಪ ಕಳೆದ ರಾತ್ರಿ ಸುರಿದ ಮಳೆಗೆ ಶುಕ್ರವಾರ ಬೆಳಿಗ್ಗೆ ವಿದ್ಯುತ್ ಕಂಬ ತುಂಡಾಗಿ ರಸ್ತೆ ಮೇಲೆ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ.
ಸಾಣಾಪುರ ಗ್ರಾಮದಿಂದ ವಿರುಪಾಪುರಗಡ್ಡೆ ಗ್ರಾಮದ ವರೆಗಿನ ವಿಜಯನಗರ ಕಾಲುವೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅದರ ಸಮೀಪವೇ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ.
ಅದೇ ಸಮಯದಲ್ಲಿ ಗಂಗಾವತಿ ನಗರದ ಕಡೆಯಿಂದ ಹುಲಿಗಿ ಗ್ರಾಮಕ್ಕೆ ಸಾರಿಗೆ ಇಲಾಖೆಯ ಬಸ್ಸೊಂದು ಸಂಚರಿಸುತ್ತಿದ್ದು, ಚಾಲಕನ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ವಿದ್ಯುತ್ ಕಂಬ ಉರುಳುತ್ತಿದ್ದಂತೆ, 100 ಮೀಟರ್ ಅಂತರದಲ್ಲಿ ಬಸ್ ನಿಲ್ಲಿಸಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಈ ಕುರಿತು ಸ್ಥಳೀಯರು ಗಂಗಾವತಿ ಕೆ.ಇ.ಬಿ ಘಟಕಕ್ಕೆ ಕರೆ ಮಾಡಿ ವಿದ್ಯುತ್ ಕಂಬ ಉರುಳಿದ ಮಾಹಿತಿ ನೀಡಿದ ಕೂಡಲೆ ವಿದ್ಯುತ್ ಸಂಪರ್ಕ ಕಡಿತ ಮಾಡಿದರು. ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತವಾಗಿತ್ತು.
ಘಟನಾ ಸ್ಥಳಕ್ಕೆ ಲೈನ್ ಮನ್ಗಳು ಬಂದು ತುಂಡಾದ ಕಂಬ, ವೈರ್ ಗಳನ್ನು ಸ್ಥಳಾಂತರಿಸಿದರು. ಈ ವೇಳೆ ಸ್ಥಳೀಯರು, ಕಾಲುವೆ ಕಾಮಗಾರಿ ಕೆಲಸಗಾರರು, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ, ಸಾಣಾಪುರ ಗ್ರಾಮಸ್ಥರು ನೆರವಾದರು.