ಕೊಪ್ಪಳ: 'ಗ್ರಾಮೀಣ ಜನತೆ ಮುಗ್ಧರಾಗಿದ್ದು, ಮಹಿಳೆಯರು ಜಾಗೃತಿಗೊಂಡು ತಮ್ಮ ಕುಟುಂಬಗಳ ಜೊತೆ ಗ್ರಾಮಗಳ ಸಬಲೀಕರಣಕ್ಕೆ ಒತ್ತು ನೀಡಬೇಕು' ಎಂದು ಡಿವೈಎಸ್ಪಿ ಗೀತಾ ಬೇನಾಳ ಹೇಳಿದರು
ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ 'ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಸಂಸ್ಥೆ ಕೊರೊನಾ ಸಹಾಯಧನ' ಅಡಿಯಲ್ಲಿ ಕೂಡ್ಲಿಗಿಯ ಸ್ನೇಹ ಸಂಸ್ಥೆಯು ದಮನಿತ ಮಹಿಳೆಯರಿಗೆ ನೀಡಿದ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
‘ಮಹಿಳೆಯರು ತಮ್ಮ ಗ್ರಾಮಗಳಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ ಪ್ರಕರಣ ಕಂಡು ಬಂದರೆ ಪೊಲೀಸರ ಗಮನಕ್ಕೆ ತರಬೇಕು. ಸರ್ಕಾರೇತರ ಸಂಸ್ಥೆಗಳಿಂದ ತಿಳಿವಳಿಕೆ ಪಡೆದು ಜಾಗೃತಿ ಹೊಂದಬೇಕು‘ ಎಂದರು.
ಸಂಸ್ಥೆಯನಿರ್ದೇಶಕ ಟಿ.ರಾಮಾಂಜನೇಯ ಮಾತನಾಡಿ, ‘ಸ್ನೇಹ ಸಂಸ್ಥೆ ಬಳ್ಳಾರಿ ಮತ್ತು ಕೊಪ್ಪಳ ಆಯ್ದ ತಾಲ್ಲೂಕುಗಳಲ್ಲಿ ದಮನಿತ ಮಹಿಳೆಯರ ಮತ್ತು ಮಕ್ಕಳ ಪರವಾಗಿ ಕೆಲಸ ಮಾಡುತ್ತಿದೆ. ದಿ ಪ್ರಿಂಟರ್ಸ್ ಮೈಸೂರು ಸಂಸ್ಥೆಯವರು ನಮಗೆ ಸಹಾಯಧನ ನೀಡಿದ್ದು ಪತ್ರಿಕೆಯ ಸಹಾಯ ಸ್ಮರಣೀಯ. ಆ ಹಿನ್ನೆಲೆಯಲ್ಲಿ500 ಮಹಿಳೆಯರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು‘ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸರೋಜಾ ಬಾಕಳೆ ಮಾತನಾಡಿ, ‘ಕೋವಿಡ್-19 ಸಂದರ್ಭದಲ್ಲಿ ವೇತನ ಪಡೆಯುವ ಜನರು ಹೊರತುಪಡಿಸಿದರೆ ಬಹುತೇಕ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಕಿಟ್ ಹಂಚುವ ಮೂಲಕ ಸಹಾಯ ಮಾಡುವ ಕಾರ್ಯ ಶ್ಲಾಘನೀಯ‘ ಎಂದರು.
‘ಜಿಲ್ಲೆಯಲ್ಲಿ ಅಪೌಷ್ಟಿಕತೆ, ಬಾಲ್ಯವಿವಾಹ, ಮಕ್ಕಳರಕ್ಷಣೆಯಂತಹ ಗಂಭೀರ ಸಮಸ್ಯೆಗಳು ಇವೆ. ಅವುಗಳ ಬಗ್ಗೆ ಮಹಿಳೆಯರು ತಿಳಿದುಕೊಂಡು ಕೆಲಸ ಮಾಡಬೇಕು‘ ಎಂದು ಮನವಿ ಮಾಡಿದರು.
ಸ್ನೇಹ ಸಂಸ್ಥೆಯ ಸಹ ನಿರ್ದೇಶಕಿ ಕೆ.ಪಿ.ಜಯಾ, ಶೋಭಾ ಮಠದ, ಕೆ.ಗಾಯತ್ರಿ, ಜಿ.ಕೆ ಮಹಾಲಕ್ಷ್ಮೀ, ಶರಣಮ್ಮ ಮುಂತಾದವರು ಇದ್ದರು.