ತಾವರಗೇರಾ: ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ತಂಪು ಪಾನೀಯ ಹಾಗೂ ಹಣ್ಣುಗಳ ಸೇವನೆಗೆ ಮೊರೆಹೋಗಿದ್ದಾರೆ.
ಪಟ್ಟಣದ ರಸ್ತೆ ಬದಿಗಳಲ್ಲಿ ಅನಾನಸು ಹಣ್ಣಿನ ಮಾರಾಟದ ಭರಾಟೆಯು ಜೋರಾಗಿದೆ. ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಮಹಿಳೆಯರು, ಮಕ್ಕಳು ಅನಾನಸು ಖರೀದಿಸುತ್ತಿದ್ದಾರೆ.
ಈ ಅನಾನಸು ಹಣ್ಣುಗಳಿಂದ ಬರ್ಫಿ, ಶರಬತ್, ಕೇಕ್, ಜಾಮ್ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇವುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.
ತಾವರಗೇರಾ ಮಾರುಕಟ್ಟೆಯಲ್ಲಿ ಈ ಹಣ್ಣುಗಳ ಮಾರಾಟ ತುಸು ಜೋರಾಗಿದೆ.
ಸಿಂಧನೂರಿನಿಂದ ಹಣ್ಣಿನ ವ್ಯಾಪಾರಿ ಸಲಿಂ ಪಾಷಾ ಮತ್ತು ಖಾಸಿಂ ಸಹೋದರರು ಟಂ ಟಂ ವಾಹನದಲ್ಲಿ ಈ ಹಣ್ಣುಗಳನ್ನು ತುಂಬಿಕೊಂಡು ಮಾರಾಟಕ್ಕೆ ಬಂದಿದ್ದಾರೆ. ಹಣ್ಣುಗಳಿಂದಲೇ ವಾಹನವನ್ನು ಅಲಂಕಾರ ಮಾಡಿ ಗ್ರಾಹಕರನ್ನು ಆಕರ್ಷಿಸುತಿದ್ದಾರೆ. ವಾಹನದತ್ತ ಬಂದ ಗ್ರಾಹಕರು ಹಣ್ಣುಗಳನ್ನು ಖರೀದಿಸದೇ ಹಿಂದಿರುಗುವುದಿಲ್ಲ.
’ಅನಾನಸು ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ. ಸಾಕಷ್ಟು ಜನರು ನಿತ್ಯ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಒಂದು ಹಣ್ಣು ಗಾತ್ರದ ಆದಾರದ ಮೇಲೆ ₹ 40ರಿಂದ ₹ 50 ರ ತನಕ ಮಾರಾಟ ಮಾಡುತ್ತೇವೆ. ಹಣ್ಣುಗಳಿಗೆ ಬೇಡಿಕೆ ಹೆಚ್ಚುತಲೇ ಇದ್ದು, ಉಡುಪಿ ಮತ್ತು ಕಾರವಾರದಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ‘ ಎಂದು ಸಲೀಂ ಪಾಷಾ ಹೇಳುತ್ತಾರೆ.
ಉಪಯೋಗ:
ಅನಾನಸು ಹಣುಗಳ ಸೇವನೆಯಿಂದ ಜಂತುಹುಳು ನಿವಾರಣೆಯಾಗುತ್ತದೆ. ಆಹಾರ ಪಚನ ಕ್ರೀಯೆಗೆ ಸಹಾಯಕವಾಗುತ್ತದೆ. ಹಣ್ಣಿನ ರಸದಲ್ಲಿ ಜೇನು ತುಪ್ಪ ಸೇರಿಸಿ ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ. ತಲೆ ಸುತ್ತು ನಿರ್ಮೂಲನೆ, ರಕ್ತ ಹೀನತೆ, ಹೊಟ್ಟೆ ನೋವು ನಿವಾರಣೆಯಾಗುತ್ತದೆ ಎಂದು ವೈದ್ಯ ವೈ. ಜೆ. ಸಿರಿವರ ಹೇಳುತ್ತಾರೆ.