ಕೊಪ್ಪಳ: ಜಿಲ್ಲೆಯ ಗಂಗಾವತಿಯಿಂದ ದರೋಜಿವರೆಗಿನ 35 ಕಿ.ಮೀ. ಅಂತರದ ರೈಲ್ವೇ ಬ್ರಾಡ್ಗೇಜ್ ಲೈನ್ ನಿರ್ಮಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಸಂಸತ್ತಿನಲ್ಲಿ ಬುಧವಾರ ಗಂಗಾವತಿ-ದರೋಜಿ ಹೊಸ ರೈಲ್ವೇ ಬ್ರಾಡ್ಗೇಜ್ ಲೈನ್ ನಿರ್ಮಿಸುವಂತೆ ವಿಷಯ ಮಂಡನೆ ಮಾಡಿದರು.
ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿ ವರೆಗೆ 35 ಕಿ.ಮೀ ಅಂತರವಿದ್ದು, ಇಲ್ಲಿ ರೈಲ್ವೆ ಬ್ರಾಡ್ಗೇಜ್ ನಿರ್ಮಿಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಗಂಗಾವತಿಯು ಹೆಚ್ಚು ಭತ್ತ ಬೆಳೆಯುವ ಪ್ರದೇಶವಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಭತ್ತ ಬೆಳೆಯುವುದರ ಜತೆಗೆ ಹಲವಾರು ರೈಸ್ ಮಿಲ್ಗಳು ಇವೆ. ಅಲ್ಲದೇ ಆನೆಗೊಂದಿ ಪ್ರದೇಶವು ಹನುಮಂತ ದೇವರು ಜನಿಸಿದ ನಾಡಾಗಿದೆ. ದೇಶ-ವಿದೇಶಗಳಿಂದ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಈ ಭಾಗದ ಭತ್ತದ ವ್ಯಾಪಾರದ ವಾಣಿಜ್ಯೋದ್ಯಮಕ್ಕೂ ಕೂಡ ಅನುಕೂಲವಾಗಲಿದೆ ಎಂದು ಹೇಳಿದರು.
ದರೋಜಿಯು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ದರೋಜಿಯಿಂದ ಬಳ್ಳಾರಿ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಗಂಗಾವತಿಯಿಂದ ರಾಯಚೂರು, ಮುನಿರಾಬಾದ್ ಹಾಗೂ ಮೆಹಬೂಬ್ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಸಂಸದ ಕರಡಿ ಸಂಗಣ್ಣನವರು ಸಂಸತ್ತಿನಲ್ಲಿ ವಿಷಯ ಮಂಡನೆ ಮಾಡಿದರು.