ಕೊಪ್ಪಳ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಕುಕನೂರು ತಾಲ್ಲೂಕಿನ ಗೊರ್ಲೆಕೊಪ್ಪ ಗ್ರಾಮದ ಕಟ್ಟಿ ಬಸವಲಿಂಗೇಶ್ವರ ಜಾನಪದ ಕಲಾ ಸಂಘದ ನಂದಿಧ್ವಜದ ಕಲಾ ತಂಡದವರು ನೀಡಿದ ಪ್ರದರ್ಶನ ಗಮನ ಸೆಳೆಯಿತು.
ಗೊರ್ಲೆಕೊಪ್ಪದ 11, ಚಿತ್ರದುರ್ಗದ ಐದು ಹಾಗೂ ಬೆಂಗಳೂರಿನ ಇಬ್ಬರು ಸದಸ್ಯರನ್ನು ಒಳಗೊಂಡ ರಾಜ್ಯದ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಗೊರ್ಲೆಕೊಪ್ಪದ ತಂಡ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಲೆಯನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಂಡಿತ್ತು.
‘ಹಿಂದೆ ಬೆಂಗಳೂರು, ಮೈಸೂರು, ಗೋವಾ ಸೇರಿದಂತೆ ಅನೇಕ ಕಲಾ ಪ್ರದರ್ಶನ ನೀಡಿದ್ದೇವೆ. ಇಂಥದ್ದೊಂದು ಅವಕಾಶ ಜೀವಮಾನದಲ್ಲಿ ಸಿಗುತ್ತದೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಇದು ಸಂಘದ ಎಲ್ಲರ ಅದೃಷ್ಟ’ ಎಂದು ಕಲಾತಂಡದ ಸದಸ್ಯ ಸಂಜೀವಕುಮಾರ ಕಾಶೀಮಠ ಹಾಗೂ ತಂಡದ ಮುಖಂಡ ಶರಣಯ್ಯ ಎನ್. ಇಟಗಿ ಸಂತಸ ವ್ಯಕ್ತಪಡಿಸಿದರು.