ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಎದೆಹಾಲು ಅಮೃತಕ್ಕೆ ಸಮ: ಡಾ. ಟಿ.ಲಿಂಗರಾಜ

Published 7 ಆಗಸ್ಟ್ 2023, 16:03 IST
Last Updated 7 ಆಗಸ್ಟ್ 2023, 16:03 IST
ಅಕ್ಷರ ಗಾತ್ರ

ಗಂಗಾವತಿ: ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ. ಎದೆಹಾಲಿನಲ್ಲಿರುವ ಪೌಷ್ಟಿಕಾಂಶ ಮಗುವಿಗೆ ದೊರೆತರೆ‌ ಆರೋಗ್ಯಯುತವಾಗಿ ಬೆಳೆಯುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜ ಅಭಿಪ್ರಾಯಪಟ್ಟರು.

ನಗರದ ಲಲಿತ ಮಹಲ್ ಹೋಟೆಲ್ ಸಮೀಪದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸೋಮವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ತಾಯಂದಿರು ಮಗು ಜನಿಸಿದ ಅರ್ಧತಾಸಿನೊಳಗೆ ಹಾಲುಣಿಸಬೇಕು. ಇದರಿಂದ ಮಹಿಳೆಯರ ಸೌಂದರ್ಯ ಹಾಳಾಗುವುದಿಲ್ಲ ಎಂದರು.

ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ತಾಯಿ ಎದೆಹಾಲು ಉಣಿಸುವುದರಿಂದ ಮಗುವಿಗೆ ಮಾತ್ರವಲ್ಲದೆ, ತಾಯಿಗೂ ಸಹ ಪ್ರಯೋಜನಗಳಿವೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಬೊಜ್ಜಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ತಾಯಿ ಎದೆಹಾಲಿಗೆ ಬೆಲೆ ಕಟ್ಟಲಾಗುವುದಿಲ್ಲ. ಎದೆಹಾಲು ಸೇವಿಸಿದ ಮಗು ಆರೋಗ್ಯವಾಗಿರುತ್ತದೆ. ಮಾನಸಿಕವಾಗಿ ಸದೃಢವಾಗಿರುತ್ತದೆ. ಹೀಗಾಗಿ ತಾಯಂದಿರು ಮಗುವಿಗೆ ಉದಾಸೀನ ಮಾಡದೇ ದಿನಕ್ಕೆ 8 ಬಾರಿ ಎದೆ ಹಾಲುಣಿಸಿ ಬೆಳೆಸಬೇಕು ಎಂದರು.

ತಹಶೀಲ್ದಾರ್‌ ಮಂಜುನಾಥ, ಡಾ.ವಿಜಯಪ್ರಕಾಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶರಣಪ್ಪ ಚಕೋಟಿ ಸೇರಿ ಆಸ್ಪತ್ರೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT