ಕಾರಟಗಿ: ಪಟ್ಟಣದಲ್ಲಿ ಶೀಘ್ರ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ಉದ್ಯಮಿಗಳಾದ ಕೆ. ಸಣ್ಣಸೂಗಪ್ಪ, ಕೆ.ನಾಗಪ್ಪ 6 ಎಕರೆ ಭೂಮಿ ದಾನ ನೀಡಿದ್ದಾರೆ. ನಮ್ಮ ಕಾರ್ಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ‘ಮಿಷನ್ ಇಂದ್ರ ಧನುಷ್ 5. 0' ಅಭಿಯಾನ’ಕ್ಕೆ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಸಂದರ್ಭವನ್ನು ಸ್ಮರಿಸಿದರೆ, ಅಂದೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಅಗತ್ಯ ಎಂದು ಹೇಳಿದ್ದೆ. ಎಲ್ವಿಟಿ ಸಹೋದರರು ಜಮೀನು ನೀಡಿದ್ದು ಪ್ರಸಂಶನಾರ್ಹ. ನೂತನ ಆಸ್ಪತ್ರೆ ನಿರ್ಮಾಣದಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಪ್ರತಿ ಮಗು ದೇಶದ ಸಂಪತ್ತು. ಪ್ರತಿ ಕುಟುಂಬವು ಲಸಿಕೆ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ಇಂದ್ರ ಧನುಷ್ ಕಾರ್ಯಕ್ರಮ ಜಾರಿಗೊಂಡಿದೆ. ಯಾವ ಮಗು ಲಸಿಕೆಯಿಂದ ವಂಚಿತವಾಗದಂತೆ, ಮಾರಣಾಂತಿಕ ಕಾಯಿಲೆಗೆ ತುತ್ತಾಗದಂತೆ ವೈದ್ಯರು, ಆಶಾ ಕಾರ್ಯಕರ್ತೆಯರು ಸಮರೋಪಾಧಿಯಲ್ಲಿ ಕೆಲಸ ಮಾಡಬೇಕು. ಪಾಲಕರೂ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಜವಬ್ದಾರಿತನ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರು ಜೀವನ ಬದಲಿಸಿದರೆ, ವೈದ್ಯರು ಜೀವ ಉಳಿಸುತ್ತಾರೆ. ಶಿಕ್ಷಕ ಹಾಗೂ ವೈದ್ಯರು ತಮಗಿರುವ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದರೆ ಮಾತ್ರ ಸಾರ್ಥಕ. ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಮಂಜುನಾಥರ ಸೇವೆ ಸ್ಮರಿಸಿ, ಅವರು ಇತರರಿಗೆ ಮಾದರಿ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜು, ತಾಲ್ಲೂಕು ಆಡಳಿತ ಆರೋಗ್ಯಾಧಿಕಾರಿ ಶರಣಪ್ಪ, ಆಡಳಿತ ವೈದ್ಯಾಧಿಕಾರಿ ಶಕುಂತಲಾ ಪಾಟೀಲ, ಭೂದಾನಿಗಳಾದ ಕೆ.ಸಣ್ಣಸೂಗಪ್ಪ, ಕೆ.ನಾಗಪ್ಪ, ಡಾ.ಪ್ರಕಾಶ, ಡಾ.ವೀರಭದ್ರೇಗೌಡ, ಡಾ. ಎಂ.ಐ. ಮುದಗಲ್ಲ, ಡಾ.ವೀರಣ್ಣ ಉಪ್ಪಳ, ಸಿದ್ಧನಗೌಡ, ಶಿವರೆಡ್ಡಿ ನಾಯಕ ಉಪಸ್ಥಿತರಿದ್ದರು.