ಯಲಬುರ್ಗಾ: ‘ಕಂದಾಯ ಅದಾಲತ್ ಮೂಲಕ ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಬಹುದು’ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಅನಗತ್ಯವಾಗಿ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸೇವೆ ಪಡೆಯುವ ಸಾರ್ವಜನಿಕರು ಮುಖಾಮುಖಿಯಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಉಪವಿಭಾಗಾಧಿಕಾರಿ ನಾರಾಯಣ ಕನಕರೆಡ್ಡಿ ಮಾತನಾಡಿ,‘ಕಂದಾಯ ಇಲಾಖೆಯ ಕಾರ್ಯ ಒತ್ತಡದಿಂದ ಸಕಾಲದಲ್ಲಿ ಜನರಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ಅದಾಲತ್ ಮೂಲಕ ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಹೇಳಿದರು.
ಮೂಧೋಳ ಗ್ರಾಮ ಲೆಕ್ಕಾಧಿಕಾರಿ ಕುಮಾರ ಪರಸಾಪುರ, ಕಂದಾಯ ನಿರೀಕ್ಷಕ ಹುಸೇನ ಸಾಬ್, ಸರ್ವೆ ಮೇಲ್ವಿಚಾರಕ ಶ್ರೀನಿವಾಸ, ಗ್ರಾಮದ ಮುಖಂಡರಾದ ಅಪ್ಪಣ ಪಲ್ಲೇದ, ಹೇಮರೆಡ್ಡಿ ರಡ್ಡೆರ ಹಾಗೂ ಬಸಪ್ಪ ಹಕ್ಕಿ ಇದ್ದರು.