ಅಳವಂಡಿ: ‘ನಾಡು ಕಂಡ ಮಹಾನ್ ಕವಿ ದ.ರಾ. ಬೇಂದ್ರೆ ಅವರು ಕರ್ನಾಟಕದ ವರಕವಿ ಎಂದೇ ಪ್ರಸಿದ್ಧರು. ಬೇಂದ್ರೆಯವರ ಕವನ ಸಂಕಲನ ‘ನಾಕುತಂತಿ’ಯ ಮೂಲಕ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕವಿ’ ಎಂದು ಶಿಕ್ಷಕ ನೀಲಪ್ಪ ಹಕ್ಕಂಡಿ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಸಾಪ, ತಾಲ್ಲೂಕು ಕಸಾಪ ಹಾಗೂ ಕನ್ನಡ ಸಾಹಿತ್ಯ ಪರಿಷತ್ತ್ ಅಳವಂಡಿ ಹೋಬಳಿ ಘಟಕ, ಹಟ್ಟಿ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಶನಿವಾರ ನಡೆದ ‘ಕನ್ನಡ ಸಾಹಿತ್ಯಕ್ಕೆ ದ.ರಾ. ಬೇಂದ್ರೆ ಕೊಡುಗೆ’ ಹಾಗೂ ‘ಪರೀಕ್ಷಾ ಭಯ ನಿವಾರಣೆ’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
‘ಬೇಂದ್ರೆಯವರ ಜೀವನವೇ ಒಂದು ಪಾಠವಾಗಿದೆ. ಅವರಿಗೆ ಜೀವನವೇ ಕಾವ್ಯ ಹಾಗೂ ಕಾವ್ಯವೇ ಜೀವನವಾಗಿತ್ತು. ಯುಗದ ಕವಿ, ಜಗದ ಕವಿ, ಮಾತಿನ ಗಾರುಡಿಗ, ಮಂತ್ರಶಕ್ತಿಯ ವಾಗ್ಮಿ ಎಂದು ಕರೆಸಿಕೊಳ್ಳುವ ಬೇಂದ್ರೆಯವರು ಜೀವನದ ಕಷ್ಟಗಳನ್ನು ಎದುರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.
ಶಿಕ್ಷಕ ರವಿಕುಮಾರ ಬಂಡಿ ಮಾತನಾಡಿ, ‘ಮಕ್ಕಳು ಪರೀಕ್ಷೆಗೆ ಭಯ ಪಡಬೇಕಿಲ್ಲ. ಚಿಂತೆ, ಭಯ ಬಿಟ್ಟು ಪರೀಕ್ಷೆ ಎದುರಿಸಬೇಕು. ನಿಮ್ಮ ಆತ್ಮಸ್ಥೆರ್ಯವನ್ನು ಹೆಚ್ಚಿಸಿಕೊಂಡು ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಪಡೆಯಬೇಕು. ಪರೀಕ್ಷೆ ಎಂಬ ಭಯದ ನಿವಾರಣೆಗೆ ಸರ್ಕಾರ ಅನೇಕ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪರೀಕ್ಷೆಯಂತೆ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ‘ಮಳೆ ಬಂದ ನಂತರ ಗಿಡ ಗಂಟೆಗಳು ಚಿಗುರಿ ಹಸುರಿನಿಂದ ನಳನಳಿಸುತ್ತವೆ. ಅದೇ ರೀತಿ ವಿಧ್ಯಾರ್ಥಿಗಳು ಕೂಡ ಶಿಕ್ಷಕರು ಭೋದಿಸುವ ಜ್ಞಾನವೆಂಬ ಮಳೆಯಲ್ಲಿ ನೆನೆದು ಉತ್ತಮ ಶಿಕ್ಷಣ ಪಡೆದ ಯಶಸ್ಸು ಗಳಿಸಬೇಕು’ ಎಂದರು.
ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ, ಕಸಾಪ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಗೌರವ ಕಾರ್ಯದರ್ಶಿ ಕಿರಣ ಅಂಗಡಿ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಚಿಕ್ಕಣ್ಣವರ, ಶಿಕ್ಷಕರಾದ ಪ್ರಶಾಂತ ಹಿರೇಮಠ, ನೇತ್ರಾವತಿ ಜುಮ್ಮಣ್ಣವರ, ಜುನುಸಾಬ, ದೇವಪ್ಪ ಮಲ್ಲಣ್ಣವರ, ಶಿವಾನಂದಪ್ಪ ಅಳವಂಡಿ, ಜುನಾಬೀ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.