ಕಾರಟಗಿ: ‘ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು. ಇದರಿಂದ ಸಂಘ ಹಾಗೂ ರೈತರು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಬೂದಗುಂಪಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಷಣ್ಮುಖಪ್ಪ ಕೆಂಡದ ಅಭಿಪ್ರಾಯಪಟ್ಟರು.
ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಲದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಬೇಗ ಮರುಪಾವತಿ ಮಾಡಿ ಇತರ ರೈತರಿಗೆ ಸಾಲ ದೊರೆಯುವಂತೆ ಮಾಡಬೇಕು ಎಂದರು.
ಸಾಲಗಾರ ಸದಸ್ಯರು ಮೃತರಾದರೆ ಅವರ ಕುಟುಂಬವರಿಗೆ ₹5 ಸಾವಿರ ನಗದು ವಿತರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಲುಶ್ರಮಿಸಲಾಗುವುದು’ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣೆಗೌಡ ಪೊಲೀಸ್ ಪಾಟೀಲ ಅವರು ವಾರ್ಷಿಕ ವರದಿ ಮಂಡಿಸಿ, ಸಂಘದ ಠೇವಣಿ, ಸಾಲದ ವಿವರ, ಮರುಪಾವತಿ, ಮುಂದಿನ ಯೋಜನೆಗಳ ಕುರಿತು ವಿವರಿಸಿದರು.
ಉಪಾಧ್ಯಕ್ಷೆ ಶಾಂತಾ ವೈ.ಉಮೇಶ, ಗ್ರಾಮದ ಪ್ರಮುಖರಾದ ಗುರುಸಿದ್ದಪ್ಪ ಎರಕಲ್, ಬಸವರಾಜ್ ಚಳ್ಳೂರ, ಶರಣೆಗೌಡ, ಬಿಲ್ಗಾರ ಬಸವರಾಜ್, ಶರಣೇಗೌಡ ಪೊಲೀಸ್ ಪಾಟೀಲ ಕೊಂತನೂರ ಹಾಗೂ ಸಂಘದ ಸದಸ್ಯರು ಇದ್ದರು.