ಕುಷ್ಟಗಿ: ‘ಹಿಂದುಳಿದಿರುವ ಮರಾಠ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಡಿ ತಂಟೆ ವಿಷಯವನ್ನು ಮುಂದಿಟ್ಟುಕೊಂಡು ಕನ್ನಡಿಗರನ್ನು ಕೆಣಕುತ್ತಿರುವ ಕೆಲ ಕಿಡಿಗೇಡಿಗಳು ರಾಜ್ಯದ ಮರಾಠ ಸಮುದಾಯದವರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಅಂಥವರನ್ನು ಹದ್ದು ಬಸ್ತಿನಲ್ಲಿಡುವುದು ಅಗತ್ಯವಿದೆ’ ಎಂದರು.
‘ಗಡಿ ಭಾಗದ ಮರಾಠಗೆ ಅಗತ್ಯ ನೆರವು, ಸೌಲಭ್ಯ ಒಗಿಸಿಕೊಡುವ ಮೂಲಕ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಅದೇ ರೀತಿ ಅವರ ಮಕ್ಕಳು ಕೂಡ ಕನ್ನಡ ಶಾಲೆಗಳಲ್ಲಿ ಕಲಿಯುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆಯುವುದು ಸರ್ಕಾರದ ಜವಾಬ್ದಾರಿ’ ಎಂದರು.
‘ಸಾವಿರಾರು ವರ್ಷಗಳಿಂದ ಮರಾಠರು ನಮ್ಮ ದೇಶ, ರಾಜ್ಯದಲ್ಲಿದ್ದಾರೆ. ಅವರನ್ನು ಬೇರೆಡೆ ಕಳಿಸಲು ಸಾಧ್ಯವೇ? ಅವರೂ ಇತರರಂತೆಯೇ ಬದುಕಬೇಕು. ಅವರ ಏಳ್ಗೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲೂ ಮರಾಠರನ್ನು ತೊಡಗಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಾಧಿಕಾರ ಸ್ಥಾಪನೆ ನಿಧಾರ ತೆಗೆದುಕೊಂಡಿದ್ದಾರೆ’ ಎಂದರು.
ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಜಾಲಿಹಾಳ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಭರಮಗೌಡ ಪಾಟೀಲ, ಬಿಜೆಪಿ ಕಾರ್ಯಕರ್ತರಾದ ಪ್ರಕಾಶ ತಾಳಕೇರಿ, ಚಂದ್ರಕಾಂತ ವಡಗೇರಿ, ವಿಜಯಕುಮಾರ ಹಿರೇಮಠ, ಮಹೇಶ ಕೊನಸಾಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.