ಗಂಗಾವತಿ: ‘ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಮಹಿಳಾ ಕಾಯಕೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಾ.ಪಂ ಇಒ ಡಾ.ಡಿ.ಮೋಹನ್ ಹೇಳಿದರು.
ತಾಲ್ಲೂಕಿನ ಸಂಗಾಪುರ ಗ್ರಾಮದ ಲಕ್ಷ್ಮೀ ನಾರಾಯಣ ಕೆರೆ ಪ್ರದೇಶದಲ್ಲಿ ಸಂಗಾಪುರ ಗ್ರಾ.ಪಂ ವತಿಯಿಂದ ನಡೆದ 2ನೇ ಹಂತದ ಮಹಿಳಾ ಕಾಯಕೋತ್ಸವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಯಕೋತ್ಸವ ಅಭಿಯಾನದಡಿ ತಾವೆಲ್ಲಾ ಕೆಲಸ ಮಾಡಲು ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ತಮಗೆ ತಮ್ಮೂರಲ್ಲೇ ಕೆಲಸವನ್ನು ನೀಡಲಾಗಿದೆ. ಪ್ರತಿಯೊಬ್ಬರು ಈ ಯೋಜನೆಯ ಉಪಯೋಗ ಮಾಡಿಕೊಳ್ಳಿ. ನೀವು ದುಡಿದ ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮವಾಗುತ್ತದೆ‘ ಎಂದರು.
ಕೂಲಿಕಾರರು ವ್ಯಕ್ತಿಗತ ಅಂತರದ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆಯನ್ನು ಹಾಕಿದರು.
ಗ್ರಾ.ಪಂ ಅಧ್ಯಕ್ಷ ಹರೀಶ್ ಘಂಟಾ, ಉಪಾಧ್ಯಕ್ಷೆ ಯಲ್ಲಮ್ಮ ಬಸವರಾಜ್, ಸದಸ್ಯ ವೆಂಕಟೇಶ್, ಪಿಡಿಒ ಶೇಖ್ ಸಾಬ್, ಕಾರ್ಯದರ್ಶಿ ನೂರು ಉಲ್ ಹಕ್, ತಾ.ಪಂ ಐಇಸಿ ಸಂಯೋಜಕ ಶಿವಕುಮಾರ್ ಕೆ, ವೆಂಕೋಬ ಹಾಗೂ ಗ್ರಾ.ಪಂ ಸಿಬ್ಬಂದಿ ಮತ್ತು ಮಹಿಳಾ ಕೂಲಿಕಾರರು ಇದ್ದರು.