ಕುಕನೂರು: ‘ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಟ್ಟುಗೂಡಿಸಿ ಮುಂಚೂಣಿಯಲ್ಲಿರುತ್ತಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಎಲ್ಲರೂ ಕರೆಯುವುದು ‘ನೇತಾಜಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಭಾನುವಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾತ್ರ ಕೂಡಾ ಬಹಳ ಹಿರಿದು. ಅವರ ದೇಶಪ್ರೇಮ, ಎಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ ಛಲ ಅದ್ಭುತ. ತಮ್ಮ ಸಿಡಿಲಬ್ಬರದ ಮಾತಿನಿಂದಲೇ ನೇತಾಜಿ ಎಲ್ಲರಲ್ಲೂ ದೇಶಪ್ರೇಮದ ಕಿಚ್ಚನ್ನು ಜಾಗೃತಗೊಳಿಸುತ್ತಿದ್ದರು. ಭಾರತವನ್ನು ಬ್ರಿಟಿಷರ ಬಂಧನದಿಂದ ಮುಕ್ತಗೊಳಿಸಬೇಕು ಎಂಬ ಕನಸು ಕಂಡಿದ್ದ ನೇತಾಜಿ ಅವರು ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು ಎಂದರು.
ಸ್ವಾತಂತ್ರ್ಯಕ್ಕೆ ದೊಡ್ಡ ಭದ್ರ ಬುನಾದಿಯನ್ನು ಹಾಕಿದ್ದರು. ಅವರ ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.
ಮಂಜುನಾಥ ನಾಡಗೌಡ್ರ, ಶಂಬಣ್ಣ ಜೋಳದ, ಕಳಕಪ್ಪ ಕಂಬಳಿ, ಶರಣಪ್ಪ ಈಳಿಗೇರ್, ಮಾರುತಿ ಹೊಸಮನಿ ಹಾಗೂ ಶಿವಕುಮಾರ್ ನಾಗಲಾಪುರಮಠ ಸೇರಿ ಹಲವರು ಇದ್ದರು.