ಕುಷ್ಟಗಿ: ಕೊರೊನಾ ಸೋಂಕು ಪಟ್ಟಣದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡುಬರುತ್ತಿದೆ. ಸಾರ್ವಜನಿಕರು ಮತ್ತು ವ್ಯಾಪಾರಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ.
ವ್ಯಾಪಾರ ವಹಿವಾಟು ನಡೆಸುವ ಸಂಬಂಧ ದಿನಕ್ಕೊಂದರಂತೆ ನಿಯಮಗಳು ಜಾರಿಗೆ ಬರುತ್ತಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದೆ. ಎಲ್ಲ ಚಟುವಟಿಕೆಗಳಿಗೆ ಶನಿವಾರ ಮತ್ತು ಭಾನುವಾರ ಸಂಪೂರ್ಣ ನಿರ್ಬಂಧ ಎಂದು ತಿಳಿಸಲಾಗಿತ್ತು. ಹಾಗಾಗಿ ಸೋಮವಾರ ಖರೀದಿ ಮತ್ತಿತರೆ ಕೆಲಸ ಕಾರ್ಯಗಳಿಗೆ ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶದ ಸಹಸ್ರ ಸಂಖ್ಯೆಯ ಜನರು ಮಾರುಕಟ್ಟೆಯಲ್ಲಿ ಕಿಕ್ಕಿರಿದು ನೆರೆದಿದ್ದರು.
ಆದರೆ ಪುನಃ ಬೆಳಿಗ್ಗೆ 10 ಗಂಟೆ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ಮುಚ್ಚಿಸಿದ್ದರಿಂದ ಜನರ ಮತ್ತು ವ್ಯಾಪಾರಿಗಳು ಮತ್ತೆ ಗೊಂದಲಕ್ಕೀಡಾದರು.
‘ಕರ್ಫ್ಯೂ ವಿಧಿಸಲಾಗಿದೆ ಎಂದು ಮೊದಲೇ ಹೇಳಿದ್ದರೆ ಜನರು ಮಾರುಕಟ್ಟೆಗೆ ಬರುತ್ತಿರಲಿಲ್ಲ. ನಾವು ಅಂಗಡಿ ತೆರೆಯುತ್ತಿರಲೇ ಇಲ್ಲ. ಆದರೆ ಯಾವುದನ್ನೂ ತಿಳಿಸದೆ ದಿಢೀರನೆ ನಿಯಮ ಜಾರಿಗೊಳಿಸಿದರೆ ಹೇಗೆ’ ಎಂದು ಕೆಲವು ವ್ಯಾಪಾರಿಗಳು ಆಕ್ಷೇಪ, ಅಸಮಾಧಾನ ಹೊರಹಾಕಿದರು.
ಲಾಠಿ ಹಿಡಿದ ಮುಖ್ಯಾಧಿಕಾರಿ: ಈ ಮಧ್ಯೆ ಸ್ವತಃ ಕಾರ್ಯಾಚರಣೆಗೆ ಇಳಿದ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಲಾಠಿ ಹಿಡಿದು ಅಂಗಡಿಗಳನ್ನು ಮುಚ್ಚಿಸಲು ಮುಂದಾದರು. ಅದೇ ರೀತಿ ಪುರಸಭೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಲಾಠಿ ಹಿಡಿದು ಜನರನ್ನು ಬೆದರಿಸುತ್ತಿದ್ದುದು ಕಂಡುಬಂದಿತು.