ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ನಡೆಯುವ ಹನುಮಮಾಲಾ ವಿಸರ್ಜನೆ ಹಾಗೂ ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆ ಬಂದೋಬಸ್ತ್ಗೆ ಪೊಲೀಸ್ ಇಲಾಖೆ ಸರ್ಪಗಾವಲು ಸಜ್ಜಾಗಿದೆ.
ಕೋಮುಗಲಭೆಯಿಂದ ಗಂಗಾವತಿ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದ್ದು, ನಗರದಲ್ಲಿ ಯಾವುದೇ ಅಹಿತಕರ ಘಟನೆ, ಗಲಭೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹನುಮಮಾಲಾ ವಿಸರ್ಜನೆಗೆ 1300 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಥ ಸಂಚಲನ: ಗಂಗಾವತಿ ನಗರದಲ್ಲಿ ಸೋಮವಾರ ಬೆಳಿಗ್ಗೆ 15 ಸಾವಿರ ಭಕ್ತರ ಸಹಯೋಗದಲ್ಲಿ ನಡೆಯಲಿರುವ ಸಂಕೀರ್ತನಾ ಯಾತ್ರೆ ಅಂಗವಾಗಿ ಎಸ್ಪಿ ಅರುಣಾಂಗ್ಷು ಗಿರಿ ನೇತೃತ್ವದಲ್ಲಿ ಭಾನುವಾರ ಸಂಜೆ ನಗರದ ಸಿಬಿಎಸ್, ಮಹಾವೀರ, ಗಾಂಧಿ, ಬನ್ನಿಗಿಡದ ಕ್ಯಾಂಪ್, ಕೃಷ್ಣದೇವರಾಯ ವೃತ್ತದಲ್ಲಿ ಪಥ ಸಂಚಲನ ಜರುಗಿತು.
ಬ್ಯಾರಿಕೇಡ್ ಅಳವಡಿಕೆ: ಅಂಜನಾದ್ರಿ ಸಮೀಪ ವಾಹನ ಪಾರ್ಕಿಂಗ್ಗೆ 19 ಸ್ಥಳ ನಿಗದಿಪಡಿಸಿದ್ದು, ಸಂಚಾರ ದಟ್ಟಣೆ ತಡೆಯಲು ಪಾರ್ಕಿಂಗ್ ಬಳಿ ಪೊಲೀಸ್ ಸಿಬ್ಬಂದಿ, ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಕಡೆಬಾಗಿಲು ಬಳಿ ಹುಲಿಗಿಗೆ, ಸಾಣಾಪುರದ ಬಳಿ ಗಂಗಾವತಿಗೆ ತೆರಳುವ ವಾಹನ ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿದೆ.
ಈ ವೇಳೆ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಟಿ.ವೆಂಕಟಸ್ವಾಮಿ, ಮಂಜುನಾಥ ಸೇರಿ 500ಕ್ಕೂ ಹೆಚ್ಚು ಪೊಲೀಸರು, 20ಕ್ಕೂ ಹೆಚ್ಚು ವಾಹನಗಳು ಇದ್ದವು.
ಪೂಜೆ: ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲು ವೇದ ಪಾಠಶಾಲೆಯ ಬಳಿ ಭಾನುವಾರ ಶಾಸಕ ಪರಣ್ಣ ಮುನವಳ್ಳಿ ಅಡುಗೆ ಸಿದ್ಧತೆಗೆ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ ‘ಹನುಮನ ನಾಡಿಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಆಂಜನೇಯನ ದರ್ಶನ ದೊರಕಿಸುವಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು’ ಎಂದರು.
ತಹಶೀಲ್ದಾರ್ ಯು.ನಾಗರಾಜ, ನಗರಸಭೆ ಪೌರಾಯುಕ್ತ ಆರ್.ವಿರುಪಾಕ್ಷ ಮೂರ್ತಿ, ವಿರುಪಾಕ್ಷಪ್ಪ ಸಿಂಗನಾಳ, ಸುಭಾಷ, ಶಿವಕುಮಾರ ಎ ಇದ್ದರು.