ಅಳವಂಡಿ: ಹಲವು ದಿನಗಳ ಬಳಿಕ ಸೋಮವಾರ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾದವು. ವಿದ್ಯಾರ್ಥಿಗಳಲ್ಲಿ ಸಂತಸ ಮನೆಮಾಡಿತ್ತು.
ಸಿಬ್ಬಂದಿ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಿ, ಸ್ಯಾನಿಟೈಸರ್ ಸಿಂಪಡಿಸಿ ಒಳಬಿಟ್ಟರು.
ಶಾಲೆಗಳಲ್ಲಿ ಕಟ್ಟಡಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿತ್ತು. ತಳಿರು–ತೋರಣ ಕಟ್ಟಿ ಸಿಂಗರಿಸಲಾಗಿತ್ತು. ರಂಗೋಲಿ ಬಿಡಿಸಲಾಗಿತ್ತು.
ಬಸ್ಪಾಸ್ ಸಿಗದ ಕಾರಣಕ್ಕೆ ಗ್ರಾಮೀಣ ಪ್ರದೇಶದವರು ಗೈರಾಗಿದ್ದರು.
ಮುದುಕನಗೌಡ ಗಾಳಿ ಪ್ರೌಢ ಶಾಲೆಯಲ್ಲಿ 9 ನೇ ತರಗತಿಯ 87 ಮಕ್ಕಳಲ್ಲಿ 36 ಮಕ್ಕಳು, 10ನೇ ತರಗತಿಯ 120 ಮಕ್ಕಳಲ್ಲಿ 40 ಮಕ್ಕಳು ಹಾಜರಾಗಿದ್ದರು.
ಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 9 ನೇ ತರಗತಿಯ 110 ಮಕ್ಕಳಲ್ಲಿ 40, 10 ನೇ ತರಗತಿಯ 139 ಮಕ್ಕಳ ಪೈಕಿ 45 ಮಕ್ಕಳು ಹಾಜರಾಗಿದ್ದರು.
ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ 9 ನೇ ತರಗತಿಯ 48 ಮಕ್ಕಳಲ್ಲಿ ಐವರು, 10 ನೇ ತರಗತಿಯ 47 ಮಕ್ಕಳಲ್ಲಿ ಮೂವರು ಮಕ್ಕಳು ಹಾಜರಾಗಿದ್ದರು.
ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದು ಕಂಡುಬಂತು.
ಸಿಆರ್ಪಿ ಬಸವರಾಜ ಜೀರ್ ಮಾತನಾಡಿ,‘ಶಾಲೆಗೆ ಆಗಮಿಸಿದ ಮಕ್ಕಳಿಗೆ ಸ್ಯಾನಿಟೈಸರ್ ನೀಡಿ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ಬಸ್ ಸಂಚಾರ ಆರಂಭವಾಗದ ಕಾರಣ ಗ್ರಾಮೀಣ ಪ್ರದೇಶದ ಮಕ್ಕಳು ಗೈರಾಗಿದ್ದಾರೆ’ ಎಂದರು.
ಮುಖ್ಯಶಿಕ್ಷಕ ವೀರಣ್ಣ ಮಟ್ಟಿ, ಸುರೇಂದ್ರಗೌಡ ಪಾಟೀಲ, ಮಂಜುನಾಥ ಕೊಪ್ಪಳ, ರಫೀಕ್ ಬಳಿಗಾರ ಹಾಗೂ ಶಿಕ್ಷಕರು ಇದ್ದರು.