ಕೊಪ್ಪಳ: ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಅಂಗವಿಕಲರ ಯೋಜನೆಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗವಿಕಲ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಘಟಕದಿಂದ ಅಂಗವಿಕಲರು ನಗರದ ಜಿಲ್ಲಾಡಳಿತ ಭವನದ ಆಡಳಿತ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
2007-8ನೇ ಸಾಲಿನಲ್ಲಿ ಎನ್.ಪಿ.ಅರ್.ಪಿ.ಡಿ ಯೋಜನೆಯನ್ನು ಪುನರ್ ಪರಿಶೀಲಿಸಿ, ರಾಜ್ಯ ವಲಯ ಯೋಜನೆಯನ್ನಾಗಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿ, ಅನುಷ್ಠಾನಗೊಳಿಸಿದೆ. ಅಂಗವಿಕಲರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಅಂಗವಿಕಲರೇ ಅರಿತು ಕ್ರಮ ಕೈಗೊಳ್ಳುವುದರಿಂದ ವಿವಿಧ ಇಲಾಖೆಯ ಸೌಲಭ್ಯಗಳು ಸಕಾಲಕ್ಕೆ ಅರ್ಹ ಅಂಗವಿಕಲರಿಗೆ ತಲುಪುತ್ತವೆ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದೆ. ಆದರೆ ಇದು ಸಮರ್ಪವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್ಪಿಆರ್ ಪಿಡಿ ಮಾರ್ಗಸೂಚಿ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಎಸಿಡಿಪಿಒ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿರುವುದು ಖಂಡನೀಯ. ಭವಿಷ್ಯತ್ತಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಆರ್ ಡಬ್ಲ್ಯೂ ಮತ್ತು ಎಂಆರ್ ಡಬ್ಲ್ಯೂ ಹಾಗೂ ಯುಆರ್ ಡಬ್ಲ್ಯೂ ಅಂಗವಿಕಲರ ಭವಿಷ್ಯತ್ತಿಗೆ ಮರಣಶಾಸನವಾಗಿದೆ ಎಂದು ಮುಖಂಡರು ಹೇಳಿದರು.
ಹೀಗಾಗಿ ಕೂಡಲೇ ಎಸಿಡಿಪಿಒ ನೋಡಲ್ ಅಧಿಕಾರಿಗಳನ್ನು ರದ್ದುಗೊಳಿಸಿ, ಎಲ್ಲ ಆಯಾಮಗಳಲ್ಲೂ ಅರ್ಹರಾದ 13 ವರ್ಷಗಳಿಂದ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ಕಾರ್ಯಕರ್ತರ ಸೇವೆ ಪರಿಗಣಿಸಿ, ಮಾನವೀಯತೆ ಅನುದಾನವಾಗಿ ಗ್ರಾಮ ಮತ್ತು ತಾಲ್ಲೂಕು ಅಧಿಕಾರಿಗಳನ್ನಾಗಿ ವಿಆರ್ ಡಬ್ಲ್ಯೂ ಮತ್ತು ಎಂಆರ್ ಡಬ್ಲ್ಯೂ ಹಾಗೂ ಯುಆರ್ ಡಬ್ಲ್ಯೂ ಅವರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.