ಅಳವಂಡಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಉದ್ದೇಶದಿಂದ ಎನ್ಸಿಇಆರ್ಟಿ ನಡೆಸಿದ ರಾಷ್ಟ್ರೀಯ ಪ್ರತಿಭಾ ಪುರಸ್ಕಾರ (ಎನ್ಎಂಎಂಎಸ್) ಪರೀಕ್ಷೆಯಲ್ಲಿ ಅಳವಂಡಿ ಸಮೀಪದ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಹಲವು ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಗಮನಸೆಳೆದಿದ್ದಾರೆ.
ನೀರಲಗಿ: ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ವಿದ್ಯಾರ್ಥಿಗಳು 2020-21ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆ ಹಿಂದೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಹೋಳಿಬಸಯ್ಯ ಅವರ ಶ್ರಮವಿದೆ.
ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ದಿನ ಸೇರಿದಂತೆ ಶನಿವಾರ ಮತ್ತು ಭಾನುವಾರವೂ ತರಗತಿಗಳನ್ನು ನಡೆಸಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳು: ಆರ್.ಎಂ.ಶಿವುಕುಮಾರ, ಬಸವರಾಜ, ಪವಿತ್ರಾ ಐನಕ್ಕನರ, ಅಂಬಿಕಾ ಅಜ್ಜನವರ, ಪವನ ಕುಮಾರ ರಾಮನಗೌಡ, ಬಸವರಾಜ ದಡ್ಡಿನ, ಅನ್ನಪೂರ್ಣ ಯಲ್ಲಮ್ಮನವರ ಎನ್ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ.
ಮೈನಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ಬಸವರಾಜ ಚಿತ್ತಾಪುರ ಅವರ ಮಾರ್ಗದರ್ಶನದಿಂದ ಈ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಎನ್ಎಂಎಂಎಸ್ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದಾರೆ.
ಇದೇ ಶಾಲೆಯ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.
ಲಾಕ್ಡೌನ್ನಲ್ಲಿ ನಿರಂತರಪರಿಶ್ರಮ: ಎನ್ಎಂಎಂಎಸ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಹಿಂದಿನ ವರ್ಷದಲ್ಲಿ ನಡೆದ ಪರೀಕ್ಷೆ ಪತ್ರಿಕೆಗಳನ್ನು ಇರಿಸಿಕೊಂಡು ಶಿಕ್ಷಕರು ಪಾಠಮಾಡುತ್ತಿದ್ದರು.
ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.