ಗಂಗಾವತಿ: ನಗರದ ಉಪವಿಭಾಗ ಆಸ್ಪತ್ರೆಯ ಸ್ಟಾಫ್ ನರ್ಸಗೆ ಕೊರೊನಾ ಸೋಂಕು ಪತ್ತೆಯಾಗಿದೆ.32 ವರ್ಷದ ಬಸಾಪಟ್ಟಣ ಮೂಲದ ನರ್ಸ್ ನಗರದ ವಡ್ಡರ ಓಣಿಯಲ್ಲಿ ವಾಸವಾಗಿದ್ದರು.
ಸ್ಥಳಕ್ಕೆ ನಗರಸಭೆ ಮತ್ತು ಕಂದಾಯ ಅಧಿಕಾರಿಗಳ ತಂಡ ದೌಡಾಯಿಸಿದ್ದು, ಏರಿಯಾ ಸೀಲ್ಡೌನ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ ರದ್ದು ಪಡಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದ್ದಾರೆ.
ಇನ್ನೊಂದು ಪ್ರಕರಣ ವಕೀಲ ಗೇಟ್ ನಲ್ಲಿ ಪತ್ತೆಯಾಗಿದ್ದು, 3 ವರ್ಷದ ಮಗುವಿನ ತಂದೆಗೆ ಕೊರೊನಾ ಸೋಂಕು ದೃಢವಾಗಿದೆ. ಇಬ್ಬರನ್ನು ಕೊಪ್ಪಳದ ಐಸೋಲೇಶನ್ ವಾರ್ಡಗೆ ಶಿಫ್ಟ್ ಮಾಡಲಾಗಿದೆ.
ತಾಲ್ಲೂಕಿನ ಶ್ರೀರಾಮನಗರದಲ್ಲಿಯೂ 28 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಉಡುಪಿಗೆ ಹೋಗಿ ಬಂದಿದ್ದ ವ್ಯಕ್ತಿ ಶ್ರೀರಾಮನಗರದ ಮುಖ್ಯ ರಸ್ತೆಯಲ್ಲಿ ಟೀ ಅಂಗಡಿ ಮಾಡಿಕೊಂಡಿದ್ದರು.
ಉಡುಪಿಯಿಂದ ಬಂದ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ವಾಸದ ಮನೆ ವ್ಯಾಪಿಯನ್ನು ಸೀಲ್ಡೌನ್ ಮಾಡಲು ಗ್ರಾಮ ಪಂಚಾಯಿತಿ ನಿರ್ಧರಿಸಿದೆ. ನಗರದಲ್ಲಿ 2 ಮತ್ತು ಶ್ರೀರಾಮನಗರದಲ್ಲಿ 1 ಸೇರಿ ತಾಲ್ಲೂಕಿನಲ್ಲಿ ಒಂದೇ ದಿನ 3 ಪ್ರಕರಣಗಳು ಪತ್ತೆಯಾಗಿವೆ.