ಕೊಪ್ಪಳ: ಕೊರೊನಾ ಸೋಂಕಿನ ಭೀತಿಯ ಮಧ್ಯೆಯೂ ನಗರದ ಮಹಿಳೆಯರು ಶ್ರಾವಣ ಮಾಸದ ಎರಡನೇ ಶುಕ್ರವಾರ ಮನೆಗಳಲ್ಲಿಯೇ ವರ ಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಹಬ್ಬದ ಸಡಗರ ಕಂಡು ಬಂತು. ಮನೆ ಮುಂದೆ ನೆಲ ಸಾರಿಸಿ, ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಅಲಂಕರಿಸಿದ್ದರು. ವಿವಿಧ ಬಗೆಯ ಹೂವುಗಳಿಂದ ಮಂಟಪ ಮಾಡಿ, ಹೂವಿನ ಹಾರ, ಬೆಳ್ಳಿ-ಬಂಗಾರದ ಅಭರಣಗಳಿಂದ ವರಮಹಾಲಕ್ಷ್ಮಿಯನ್ನು ಸಿಂಗಾರ ಮಾಡಿ ಪ್ರತಿಷ್ಠಾಪಿಸಿದರು.
ನಂತರ ದೇವಿಯ ಮೂರ್ತಿಗೆ ಸೀರೆ ಉಡಿಸಿ ಬೆಳ್ಳಿ, ಬಂಗಾರದ ಆಭರಣ ಹಾಕಿ ವೈಭವದಿಂದ ಪೂಜೆ ನೆರೆವೇರಿಸಿದರು.
ಭಾಗ್ಯನಗರದಲ್ಲಿ ಇರುವ ಲಕ್ಷ್ಮಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೆಚ್ಚಿನ ಮಹಿಳೆಯರು ನೆರೆಯದೆ ತಮ್ಮ ಮನೆಯ ಪಕ್ಕದ ಒಬ್ಬರು ಇಬ್ಬರನ್ನು ಆಮಂತ್ರಿಸಿ ಅರಿಷಿಣ, ಕುಂಕಮ ನೀಡಿದರು.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಅಡುಗೆಯನ್ನು ಮಾಡಿ ಮನೆಮಂದಿಯಲ್ಲ ಸವಿದರು.
ಹಬ್ಬದ ಪ್ರಯುಕ್ತ ನಗರ ಹಾಗೂ ಭಾಗ್ಯನಗರದ ಸೇರಿದಂತೆ ಹಲವು ದೇವಸ್ಥಾನಗಳನ್ನು ಅಲಂಕರಿಸಿ, ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಕಾಯಿ ಹೆಚ್ಚಿದ ದರಕ್ಕೆ ಮಾರಾಟವಾದವು. ಬೆಂಗಳೂರು ಮೂಲದ ಜನತೆ ವೈಭವದಿಂದ ದೇವಿ ಪೂಜೆಯನ್ನು ನೆರೆವೇರಿಸಿದರು.