ಕೊಪ್ಪಳ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಆಚರಣೆ-2020ರ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ವತಿಯಿಂದ ನಡೆದ ‘ವಾಕಥಾನ್’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 1920ರಿಂದ 2020ರ ವರೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದ್ದು, ಸಂಸ್ಥೆಯು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ. ಫೆ. 15ರಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಕೊಪ್ಪಳ ಉತ್ತಮ ರಕ್ತ ನಿಧಿ ಎಂದು ಪ್ರಶಸ್ತಿ ನೀಡಿದ್ದು ತುಂಬಾ ಹೆಮ್ಮೆಯ ವಿಷಯವಾಗಿದೆ. ಹಾಗೆಯೇ ಇನ್ನು ಮುಂದೆ ಜಿಲ್ಲೆಯ ಯುವಕರು ರೆಡ್ ಕ್ರಾಸ್ ಸಂಸ್ಥೆಯ ದೆಯೋಧ್ಧೇಶಗಳನ್ನು ಅಳವಡಿಸಿಕೊಳ್ಳಬೇಕು. ಈ ಹಿಂದೆ ಪ್ರವಾಹಕ್ಕೆ ಸಿಲುಕಿದ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಸಂಗ್ರಹಿಸಿ, ಆಯಾ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಸರಬರಾಜು ಮಾಡಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು.
ವಾಕ್ಥಾನ್ ನಡಿಗೆಯು ನಗರದ ಗವಿಮಠದ ಆವರಣದಿಂದ ಆರಂಭವಾಗಿ ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ತಾಲ್ಲೂಕು ಕ್ರೀಡಾಂಗಣದ ವರೆಗೆ ಸಾಗಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಪೋಲಿಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲಾ ಶಾಖೆ ಕೊಪ್ಪಳ ಹಾಗೂ ಸಂಸ್ಥೆಯ ಉಪಸಭಾಪತಿ ಡಾ.ಚಂದ್ರಶೇಖರರಡ್ಡಿ ಎಸ್. ಕರಮುಡಿ, ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ಗೌರವ ಕೋಶಾಧ್ಯಕ್ಷ ಸುಧೀರ ಅವರಾದಿ, ನಿರ್ದೇಶಕರಾದ ಡಾ.ಮಂಜುನಾಥ ಸಜ್ಜನ, ಸೋಮರಡ್ಡಿ ಅಳವಂಡಿ, ಲಕ್ಷ್ಮೀಕಾಂತ ಗುಡಿ ಇದ್ದರು.