ಕೊಪ್ಪಳ: ಶೇ 3ರಷ್ಟು ಜನರಿಗೆ ಕೇಳದೆ ಶೇ 10 ಮೀಸಲಾತಿ ನಿಗದಿ ಮಾಡಿರುವ ಮನುವಾದಿಗಳು ಶೇ 8.5 ರಷ್ಟಿರುವ ಪರಿಶಿಷ್ಟ ಪಂಗಡಕ್ಕೆ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿವೆ. ಮೀಸಲಾತಿ ಪಡೆಯುವವರೆಗೆ ವಿರಮಿಸುವುದಿಲ್ಲ ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರತ್ನಾಕರ ಹೇಳಿದರು.
ನಗರದ ಜಿಲ್ಲಾಡಳಿತ ಭವನದಎದುರುಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾಜಿಲ್ಲಾ ಘಟಕ ಹಮ್ಮಿಕೊಂಡಿರುವ ಹತ್ತು ದಿನಗಳ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು.
ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5 ಮೀಸಲು ನಿಗದಿಗೆ ಕೊಟ್ಟ ಗಡುವು, ಅವಧಿ ಮುಗಿದಿದ್ದು ಸರ್ಕಾರ ಶೀಘ್ರ ಕ್ಯಾಬಿನೆಟ್ ಅನುಮೋಧನೆ ಪಡೆಯಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ಮಾಡಲು ನಿರ್ಧರಿಸಲಾಯಿತು.
ಫೆಬ್ರುವರಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ವರದಿ ಬಂದ ತಕ್ಷಣ ಮೀಸಲಾತಿ ನೀಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ ಮಾತನಾಡಿ, ಸಮಾಜದ ನಾಲ್ಕು ದಶಕದ ಹೋರಾಟಕ್ಕೆ ಬೆಲೆ ಕೊಡಬೇಕು. ಇಲ್ಲವಾದಲ್ಲಿ ಬೇಡರು ಬಯಲಿಗೆ ಬರುತ್ತಾರೆ. ಹಾಗೊಂದು ವೇಳೆ ಆದಲ್ಲಿ ಮುಂದೆ ಏನಾಗುತ್ತದೆ ಎಂದು ಹೇಳಲು ಆಗದು, ತಮ್ಮನ್ನು ಹಗುರವಾಗಿ ಪರಿಗಣಿಸಬಾರದು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅ.30 ರವರೆಗೆ ಧರಣಿ ನಡೆಸಲಾಗುವುದು ಎಂದರು.
ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಕೊಡಬೇಕಿರುವ ಶೇ 7.5 ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯನ್ನು ಈ ಕೂಡಲೇ ಜಾರಿಗೆ ತರಬೇಕು. ನ್ಯಾ.ನಾಗಮೋಹನ್ ದಾಸ್ ವರದಿ ಬಂದು ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಸರ್ಕಾರ ಬಂದು 24 ಗಂಟೆಯಲ್ಲಿ ಭರವಸೆ ಈಡೇರಿಸುವ ಕುರಿತು ಮಾತನಾಡಿದ್ದವರು, ಈಗ ಕಾರಣ ಕೊಡುತ್ತಾ ಮುಂದೆ ಸಾಗಿರುವುದು ಸರಿಯಲ್ಲ ಎಂದರು.