ತಾವರಗೇರಾ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪಂಪಾ ಪೆಟ್ರೋಲ್ ಬಂಕ್ನಲ್ಲಿ ಭಾನುವಾರ ಯೂತ್ ಕಾಂಗ್ರೇಸ್ ಘಟಕದ ವತಿಯಿಂದ ಪೆಟ್ರೋಲ್ ಡಿಸೇಲ್, ಸಿಲೆಂಡರ್ ಗ್ಯಾಸ್, ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಡಾ.ಶ್ಯಾಮೀದಸಾಬ ದೋಟಿಹಾಳ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಲೆ ಏರಿಕೆ ಮೂಲಕ ದೇಶದಲ್ಲಿ ಬಡವರನ್ನು ಸಂಕಷ್ಟಕ್ಕೆ ದೂಡಿವೆ. ಡಿಸೇಲ್ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಹೋಬಳಿ ಯುತ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಸಂಗಯ್ಯ ಹಿರೇಮಠ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ನಿತ್ಯ ಬೆಲೆ ಏರಿಕೆ ಆಗುತ್ತಿದೆ. ಇದರಿಂದ ಬಡವರು ಸಂಕಷ್ಟದಲ್ಲಿ ಸಿಲುಕಿ ಜೀವನ ನಡೆಸುವದು ಕಷ್ಟಕರವಾಗಿದೆ. ಸರ್ಕಾರ ಡಿಸೇಲ್, ಪೆಟ್ರೋಲ್, ಗ್ಯಾಸ್, ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಮಯದಲ್ಲಿ ರಸಗೊಬ್ಬರ ಮತ್ತು ಸಿಲೆಂಡರ್ ಗ್ಯಾಸ್ ಇಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಯೂತ್ ಕಾಂಗ್ರೇಸ್ ಘಟಕದ ಉಪಾಧ್ಯಕ್ಷ ವಿಜಯ್ ಚಲುವಾದಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ನಾರಿನಾಳ, ಶ್ಯಾಮ್ ಭೊವಿ ಮತ್ತು ಮುಖಂಡರಾದ ಅಮರೇಶ ಕುಂಬಾರ, ಅಮರೇಶ ಗಾಂಜಿ, ಯುತ್ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಇದ್ದರು.