ಕೊಪ್ಪಳ: ಅಜ್ಜನ ತೇರು ಮೈದಾನದಲ್ಲಿ ಸಂಚರಿಸಿ ತನ್ನ ಮನೆ ಸೇರಿದೆ. ಜ. 27ಕ್ಕೆ ಅಜ್ಜನ ಜಾತ್ರೆಗೆ ಸಂಪೂರ್ಣ ತೆರೆಬಿದ್ದಿದೆ. ಭೂಮಿಗೆ ಬರವಿದ್ದರೂ ಭಕ್ತಿಗೆ ಬರವಿಲ್ಲ ಎಂಬುದನ್ನು ಜಾತ್ರೆ ಸಾಕ್ಷೀಕರಿಸಿದೆ ಎಂಬುದು ಜಾತ್ರೆಗೆ ಬಂದ ಗಣ್ಯರು ಹೇಳುವ ಮಾತು.
ಜ. 28ರಿಂದ ಜಾತ್ರೆಯ ಎಲ್ಲ ಅಲಂಕಾರ, ವ್ಯವಸ್ಥೆಯನ್ನು ತೆಗೆದಿಡುವ ಕಾರ್ಯ ನಡೆದಿದೆ. ಭಕ್ತರು ಅದರಲ್ಲೂ ಸೇವಾ ಭಾವ ಕಾಣುತ್ತಿದ್ದಾರೆ. ದಾಸೋಹವು ನಿತ್ಯ ಪ್ರಸಾದ ನಿಲಯಕ್ಕೆ ವರ್ಗಾವಣೆಗೊಂಡಿದೆ. ಶನಿವಾರ ಪ್ರಸಾದ ಭವನದ ಚಪ್ಪರ ಕೀಳುವ ಕಾರ್ಮಿಕರು, ಅಂಗಡಿ ತೆರವು ಮಾಡುವ ವ್ಯಾಪಾರಿಗಳು, ತಮ್ಮ ತಾಂತ್ರಿಕ ಪರಿಕರ ಎತ್ತಿಡುತ್ತಿರುವ ವಿದ್ಯುತ್ ಕೆಲಸಗಾರರು, ಪೊಲೀಸರು ಮಠದ ಆವರಣದಲ್ಲಿ ಕಾರ್ಯನಿರತರಾಗಿದ್ದರು.
ಜಾತ್ರೆಯ ಅಂಗಣದಲ್ಲಿ ಬಿದ್ದ ಪ್ಲಾಸ್ಟಿಕ್ ಹೆಕ್ಕುವ ಕೈಗಳು, ಅಲ್ಲಿ ಇಲ್ಲಿ ಬೆಲೆಬಾಳುವ ವಸ್ತುಗಳೇನಾದರೂ ಸಿಕ್ಕಿಯಾವೋ ಎಂದು ಅರಸುವ ಕಣ್ಣುಗಳಿಗೇನೂ ಕೊರತೆ ಇರಲಿಲ್ಲ. ದಾಸೋಹ ಭವನದಲ್ಲಿ ಉರಿದ ಕಟ್ಟಿಗೆಯ ಇದ್ದಿಲು ಒಟ್ಟುಗೂಡಿಸುವ ಮಹಿಳೆಯರು, ಶಾಮಿಯಾನ ತೆರವುಗೊಳಿಸುವವರು.... ಹೀಗೆ ಮಠದ ಆವರಣದಲ್ಲಿ ಅಕ್ಷರಶಃ ಕಾಯಕ ಜಾತ್ರೆ ನಡೆಯುತ್ತಿದೆ. ಭಕ್ತರ ಸಂಖ್ಯೆ ನಿಧಾನಕ್ಕೆ ಇಳಿಮುಖವಾಗಿದೆ. ಆದರೆ, ಜಾತ್ರೆಯ ಗುಂಗು ಇನ್ನೂ ಹೋಗಿಲ್ಲ ಎನ್ನುತ್ತಾರೆ ಭಕ್ತರು.
ಮಠದ ಮೂಲಗಳು ಹೇಳುವ ಪ್ರಕಾರ ರಥೋತ್ಸವದ ದಿನ ಸುಮಾರು 4 ಲಕ್ಷ ಜನ ಭಕ್ತರು ಬಂದಿದ್ದರು. ಉಳಿದ ಎರಡು ದಿನ ಸರಾಸರಿ ಒಂದೂವರೆಯಿಂದ ಎರಡು ಲಕ್ಷ ಜನ ಬಂದಿದ್ದಾರೆ. ಜ. 16ರಿಂದ 22ರವರೆಗೂ ಇದೇ ಪ್ರಮಾಣದ ಜನ ಬಂದಿದ್ದಾರೆ. ದಾಸೋಹ ಭವನದಲ್ಲಿ ಜನರ ಒತ್ತಡವನ್ನು ನಿಭಾಯಿಸುವುದೇ ಕಷ್ಟವಾಗಿಬಿಟ್ಟಿತ್ತು ಎನ್ನುತ್ತವೆ.
**
ಪೊಲೀಸರ ಹದ್ದಿನ ಕಣ್ಣು
ವಿಶೇಷವೆಂದರೆ ಈ ಬಾರಿ ಜಾತ್ರೆಯಲ್ಲಿ ಅಪರಾಧ ಪ್ರಕರಣಗಳು ನಡೆದಿಲ್ಲ. ಜ. 23ರಂದು ತಿರುಗು ತೊಟ್ಟಿಲಿನಿಂದ ಬಿದ್ದು ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಬಿಟ್ಟರೆ ಬೇರೆ ಯಾವ ಅವಘಡಗಳೂ ಸಂಭವಿಸಿಲ್ಲ ಎಂದು ಪೊಲೀಸರು ನಿಟ್ಟುಸಿರುಬಿಟ್ಟರು. ಅಪರಾಧ ಪ್ರಕರಣ ಸಂಭವಿಸದಂತೆ ಹದ್ದಿನ ಕಣ್ಣಿಟ್ಟು ಕಾದ ಪೊಲೀಸರ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು ಎನ್ನುತ್ತಾರೆ ಮಠದ ವಕ್ತಾರರು.