ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಅಣೆಕಟ್ಟೆಯ 33 ಕ್ರಸ್ಟ್ಗೇಟ್ಗಳ ಪೈಕಿ 10 ಗೇಟ್ಗಳನ್ನು ಒಂದೂವರೆ ಅಡಿಗಳಷ್ಟು ತೆರೆದು 26 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.
1,633 ಅಡಿ ಎತ್ತರದ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ 1631ರಷ್ಟು ಏರಿಕೆಯಾಗಿದ್ದು, ಭರ್ತಿಯಾಗಲು ಕೇವಲ ಎರಡು ಅಡಿ ಮಾತ್ರ ಬಾಕಿ ಉಳಿದಿದೆ. 85,248 ಕ್ಯೂಸೆಕ್ ನೀರು ಅಣೆಕಟ್ಟೆಗೆ ಹರಿದುಬರುತ್ತಿದೆ. ಗೇಟ್ ತೆರೆದಿರುವುದರಿಂದ ಹಾಲ್ನೊರೆಯಂಥ ಜಲಧಾರೆ ಮನಸೂರೆಗೊಳ್ಳುತ್ತಿದ್ದು, ಅಣೆಕಟ್ಟೆ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಲ್ಲಿ ಹೆಚ್ಚಳವಾಗಿದೆ.
ಜುಲೈ 10ರಂದು ಎಲ್ಲ ನಾಲೆಗಳಿಗೆ ನೀರು ಹರಿದುಬಿಡಲಾಗುತ್ತಿದ್ದು, ನೀರಾವರಿ ಪ್ರದೇಶ ಗಂಗಾವತಿ ತಾಲ್ಲೂಕಿನಲ್ಲಿ ಬತ್ತದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಆದರೆ, ಅಣೆಕಟ್ಟೆಯ ಆರಂಭ ಭಾಗದಲ್ಲೇ ಹಾನಿಗೊಳಗಾಗಿರುವ ನಾಲೆಯನ್ನು ದುರಸ್ತಿಗೊಳಿಸಬೇಕಿತ್ತು.
ಇದೀಗ ನಾಲೆ ಒತ್ತಡ ತಡೆಯಲಾರದೇ ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದು ಒಳಹರಿವು ಹೆಚ್ಚಳಕ್ಕೆ ಕಾರಣ. ಕ್ರಸ್ಟ್ಗೇಟ್ಗಳನ್ನು ಯಾವುದೇ ಸಂದರ್ಭದಲ್ಲಿ ತೆರೆಯುವ ಸಾಧ್ಯತೆಯಿದೆ ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿತ್ತು.