ಯಲಬುರ್ಗಾ: ಪಟ್ಟಣದ ಹೊರವಲಯದ ಬೇವೂರು ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗೆ ಹೊಂದಿಕೊಂಡ (ಬಳಗೇರಿಯ ಹಳೆ ರಸ್ತೆ) ಗಣಪ್ಪನಗುಡಿಯಲ್ಲಿನ ವಿಗ್ರಹ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಒಂದು ವಾರದ ಹಿಂದೆಯೇ ಗುಡಿಯಲ್ಲಿನ ಗಣೇಶನ ಮೂರ್ತಿ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ.
ಊರಿಂದ ಸುಮಾರು ಒಂದು ಕಿ,ಮೀ ದೂರದಲ್ಲಿರುವ ಈ ದೇವಸ್ಥಾನಕ್ಕೆ ನಿರ್ದಿಷ್ಟವಾಗಿ ಯಾರೊಬ್ಬರು ವಾರಸುದಾರರು ಇಲ್ಲದ ಕಾರಣ ಹಾಗೂ ಉಸ್ತುವಾರಿ ಇರದೇ ಇರುವುದರಿಂದ ಈ ಗುಡಿಯ ವಿಗ್ರಹ ಪದೇ ಪದೇ ಕಳ್ಳತನಕ್ಕೆ ಗುರಿಯಾಗುತ್ತಿದೆ. ಕಳೆದ ಏಳೆಂಟು ತಿಂಗಳ ಹಿಂದೆ ವಿಗ್ರಹ ನಾಪತ್ತೆಯಾಗಿತ್ತು. ಆಗ ಭಕ್ತರು ಸೇರಿ ಹೊಸ ಮೂರ್ತಿಯೊಂದನ್ನು ತಂದು ಪ್ರತಿಷ್ಠಾಪಿಸಲಾಗಿತ್ತು. ಆದರೆ ಈಚೆಗೆ ಅದನ್ನು ಕೂಡಾ ಕಿಡಿಗೇಡಿಗಳು ಕದ್ದೊಯ್ಯುದಿದ್ದಾರೆ ಎಂದು ಜನತೆ ಹೇಳುತ್ತಿದ್ದಾರೆ.
ಸಂಜೆಯಾಗುತ್ತಿದ್ದಂತೆ ಈ ದೇವಸ್ಥಾನದ ಕಡೆ ವಾಯುವಿಹಾರಕ್ಕೆಂದು ಸಾಕಷ್ಟು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಆದರೆ ದೇವಸ್ಥಾನದೊಳಗೆ ಬಂದು ಹೋಗುವುದು ತೀರಾ ಕಡಿಮೆ. ಅಲ್ಲದೇ ಸುತ್ತಮುತ್ತಲಿನ ಹೊಲಗಳಲ್ಲಿ ಯಾವುದೇ ರೀತಿಯ ಬೆಳೆ ಇಲ್ಲದ ಕಾರಣ ರೈತರ ಓಡಾಟ ಇಲ್ಲದಾಗಿದೆ. ಇದನ್ನು ಅರಿತ ಕೆಲ ಕಿಡಿಗೇಡಿಗಳು ಇಸ್ಪೀಟ್ ಆಟವಾಡಲೂ ಈ ದೇವಸ್ಥಾನವನ್ನು ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ವಿಗ್ರಹದೊಳಗೆ ಮತ್ತು ವಿಗ್ರಹ ಪ್ರತಿಷ್ಠಾನ ಸ್ಥಳದಲ್ಲಿ ನಿಧಿ ಅಥವಾ ಸಂಪತ್ತಿದೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿದವರು ಕೂಡಾ ವಿಗ್ರಹ ನಾಶಕ್ಕೆ ಮುಂದಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.
ಯಾವುದೇ ರೀತಿಯ ವಾರಸುದಾರಿಕೆ ಇಲ್ಲದಿರುವುದು, ಊರಿಂದ ಬಲು ದೂರದಲ್ಲಿರುವ ಈ ದೇವಾಲಯದ ವಿಘ್ನೆಶ್ವರ ಒಬ್ಬಂಟಿಯಾಗಿದ್ದದ್ದೇ ಕಳ್ಳರಿಗೆ ಹೆಚ್ಚಿನ ಅನುಕೂಲವಾದಂತಿದೆ. ಯಾರು ಇಲ್ಲದ ಸಮಯದಲ್ಲಿ ಹೊತ್ತೊಯ್ದ ವಿಗ್ರಹ ಇನ್ನೂವರೆಗೂ ಅದರ ಸುಳಿವೇ ಇಲ್ಲ. ಆದರೆ ಭಕ್ತರು ವಿಗ್ರಹ ಇರುವ ಸ್ಥಳಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವವನ್ನು ಪ್ರದರ್ಶಿಸುತ್ತಿರುವುದು ಮಾತ್ರ ಎಂದಿನಂತೆ ಮುಂದುವರೆದಿದೆ.