ಮೆಣೇದಾಳ ಸಿಆರ್ಸಿ ವ್ಯಾಪ್ತಿಯಲ್ಲಿ ರುವ ಬಚನಾಳ ಶಾಲೆಯಲ್ಲಿ 143 ವಿದ್ಯಾರ್ಥಿಗಳ ದಾಖಲಾತಿ ಇದೆ. ಆವರಣ ದಲ್ಲಿ ಸುಸಜ್ಜಿತ ಅಡುಗೆ ಕೋಣೆ ಇದ್ದರೂ ಇಲ್ಲದಂತಾಗಿದೆ. ಸರ್ಕಾರ ಅನುದಾನ ನೀಡುತ್ತಿದ್ದರೂ ಅಧಿಕಾರಿಗಳು, ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ವರ್ಷಪೂರ್ತಿ ಕಟ್ಟಿಗೆ ಬಳಸಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ಅಡುಗೆ ಮಾಡುವಾಗ ಬೀಸುವ ಗಾಳಿಯಿಂದ ಕಸ, ಮಣ್ಣಿನ ದೂಳು ಅಡುಗೆಯಲ್ಲಿ ಸೇರುತ್ತಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯಥ್ಯಯವಾಗುತ್ತಿದೆ. ಅಡುಗೆ ತಯಾರಿಕೆಗೆ ಕಟ್ಟಿಗೆ ಬಳಸುವುದರಿಂದ ಶಾಲಾ ಕೊಠಡಿಯ ಒಳಗೆ ಹೊಗೆ ಹರಡುತ್ತದೆ. ಇದರಿಂದ ವಿದ್ಯಾರ್ಥಿಗಳು ಕೆಮ್ಮುತ್ತಾ ಪಾಠ ಕೇಳುವಂತಹ ಪರಿಸ್ಥಿತಿ ಮುಂದುವರೆದಿದೆ.