ಮಳವಳ್ಳಿ: ತಾಲ್ಲೂಕಿನ `ಗಗನಚುಕ್ಕಿ ಜಲಪಾತೋತ್ಸವ'ವನ್ನು ಸೆ. 14 ಮತ್ತು 15ರಂದು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದು, ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ಗಗನಚುಕ್ಕಿ ಜಲಪಾತದ ಬಳಿ ಮಂಗಳವಾರ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ ಅವರು ಮಾತನಾಡಿದರು. ಪ್ರವಾಸಿಗರನ್ನು ಆಕರ್ಷಿಸಿಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಹೊರತು; ಯಾರ ಸ್ವಾರ್ಥಕ್ಕಾಗಿಯೂ ಅಲ್ಲ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ರೂ 25 ಲಕ್ಷ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ 15 ಲಕ್ಷ ಬಿಡುಗಡೆ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. ಎರಡು ದಿನಗಳು ಮಧ್ಯಾಹ್ನವೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಪ್ರವಾಸಿಗರಿಗೆ ಸಕಲ ಸೌಲಭ್ಯ ನೀಡಲು ಸಿದ್ಧತೆ ನಡೆಸಲಾಗಿದೆ. ಪ್ರವಾಸಿತಾಣ ಅಭಿವೃದ್ಧಿಗಾಗಿ ಪ್ರವಾಸೋಧ್ಯಮ ಇಲಾಖೆಯಿಂದ ರೂ 3 ಕೋಟಿ ಬಿಡುಗಡೆಯಾಗಿದ್ದು, ಅದನ್ನು ಪ್ರವಾಸಿಗರಿಗೆ ಮೂಲ ಸೌಲಭ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿ ಸಲಾಗುವುದು ಎಂದರು.
ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಎನ್. ವಿಶ್ವಾಸ್, ಎಂ. ಸತೀಶ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಶಾಂತ ಹುಲ್ಮನಿ, ತಹಶೀಲ್ದಾರ್ ಎಂ.ಆರ್. ರಾಜೇಶ್, ಡಿವೈಎಸ್ಪಿ ಜಿ.ಸಿ. ಚಿಕ್ಕಣ್ಣ, ಗ್ರೇಡ್-2 ತಹಶೀಲ್ದಾರ್ ಸಿದ್ದು, ವಾರ್ತಾಧಿಕಾರಿ ರಾಜು ಹಾಜರಿದ್ದರು.