ಮಂಡ್ಯ: ‘ರಾಷ್ಟ್ರದ ರಕ್ಷಣೆಯಲ್ಲಿ ಸೈನಿಕರು, ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಅಪಾರವಾಗಿದ್ದು, ಪ್ರಾಣದ ಹಂಗನ್ನು ತೊರೆದು ಮಾಡುವ ಸೇವೆ ಬಹಳ ಪ್ರಮುಖವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಇಲ್ಲಿನ ಅರಕೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ದರೋಡೆ ಮತ್ತು ಅರ್ಚಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ವೇಳೆ ಅಪಾಯವನ್ನು ಲೆಕ್ಕಿಸದೆ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಿದ ಪೊಲೀಸ್ ಸಿಬ್ಬಂದಿಯನ್ನು ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.
‘ಈ ಪ್ರಕರಣ ಜಿಲ್ಲೆಯ ಜನರಲ್ಲಿ ತಲ್ಲಣ ಉಂಟು ಮಾಡಿತ್ತು. ಅಂತೆಯೇ ಘಟನೆ ನಡೆದ 36 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇದು ನಿಜಕ್ಕೂ ಅತ್ಯುತ್ತಮ ಕೆಲಸ’ ಎಂದು ಶ್ಲಾಘಿಸಿದರು.
ಪೂರ್ವ ಪೊಲೀಸ್ ಠಾಣೆ ಪಿಎಸ್ಐ ಶರತ್ಕುಮಾರ್, ಹೆಡ್ ಕಾನ್ಸ್ಟೆಬಲ್ಗಳಾದ ಅನಿಲ್ಕುಮಾರ್ ಮತ್ತು ಕೃಷ್ಣಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ವರಿಷ್ಠಾಧಿಕಾರಿ ಧನಂಜಯ್ ಇದ್ದರು.