ಕೆ.ಆರ್.ಪೇಟೆ: ತಾಲ್ಲೂಕಿನ ಬೇಲದಕೆರೆ ಗ್ರಾಮದಲ್ಲಿರುವ ಪ್ರಾಚೀನ ಅಮೃತೇಶ್ವರ (ಈಶ್ವರ) ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಕಾಮಗಾರಿ ವೀಕ್ಷಿಸಿ ಸೂಕ್ತ ನಿರ್ದೇಶನ ನೀಡಿದರು.
ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕೆ.ಆರ್.ಪೇಟೆ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಆಗಮಿಸಿದ ಅವರು ತಾಲ್ಲೂಕಿನಲ್ಲಿ ಸಂಸ್ಥೆಯ ಕಾರ್ಯಕ್ರಮಗಳ ಅನುಷ್ಠಾ, ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಜೀರ್ಣೋದ್ದಾರಗೊಳ್ಳುತ್ತಿರುವ ದೇವಸ್ಥಾನಗಳ ಮಾಹಿತಿ ಪಡೆದರು.
ತಾಲ್ಲುಕಿನಲ್ಲಿ ಹೊಯ್ಸಳ ಅರಸರ ಕಾಲದಲ್ಲಿ ನಿರ್ಮುತವಾದ ಮಂಚೀಬೀಡು, ಹರಿಹರಪುರ, ಮಡುವಿನಕೋಡಿ ಮತ್ತು ಬೇಲದಕೆರೆ ಮುಂತಾದ ಗ್ರಾಮಗಳಲ್ಲಿ ಶಿಥಿಲವಾಗಿದ್ದ ದೇವಾಲಯಗಳ ಜೀರ್ಣೋದ್ದಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ನೆರವು ನೀಡಿದೆ. ಈ ಹಿನ್ನಲೆಯಲ್ಲಿ ಬೇಲದಕೆರೆ ಗ್ರಾಮಕ್ಕೆ ತೆರಳಿ ಅಮೃತೇಶ್ವರ ದೇವಾಲಯದ ಕಾಮಗಾರಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ‘ಭಾರತೀಯ ಪರಂಪರೆಯ ಪ್ರತಿನಿಧಿಗಳೆಂದರೆ ದೇವಾಲಯಗಳಾಗಿದ್ದು, ಆ ಮೂಲಕ ನಾಡಿನ ಸಂಸ್ಕೃತಿ ಅರ್ಥವಾಗುತ್ತದೆ. ನಾಡಿನಲ್ಲಿ ಸಾವಿರಾರು ದೇವಾಲಯಗಳು ವಿನಾಶದ ಅಂಚಿನಲ್ಲಿದ್ದು, ಅವುಗಳ ಜೀರ್ಣೋದ್ದಾರಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಗ್ರಾಮ ಮುಖಂಡರಾದ ಬೇಲದಕೆರೆ ನಂಜಪ್ಪ, ಪಾಪೇಗೌಡ, ಶಿಕ್ಷಕ ಬಿ.ಸಿ.ಎಸ್.ಕುಮಾರ್, ಮರೀಗೌಡ, ವಿಜಯಲಕ್ಷ್ಮೀ ಮಂಜೇಗೌಡ ಇದ್ದರು.