ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ರಂಗನತಿಟ್ಟು ಪಕ್ಷಿಧಾಮದಲ್ಲಿ ಮಂಗಳವಾರದಿಂದ ದೋಣಿ ವಿಹಾರ ಪುನರಾರಂಭವಾಗಿದೆ.
ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಕಳೆದ 15 ದಿನಗಳಿಂದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿತ್ತು. ರಂಗನತಿಟ್ಟಿನಲ್ಲಿ ಒಂದು ಮರ ದೋಣಿ ಹಾಗೂ 16 ಫೈಬರ್ ದೋಣಿಗಳಿದ್ದು, ಎಲ್ಲವೂ ನದಿಗೆ ಇಳಿದಿವೆ.
ಪಕ್ಷಿಧಾಮ ಪ್ರವೇಶ ಶುಲ್ಕ ಭಾರತೀಯರಿಗೆ ₹70, ವಿದೇಶಿಯರಿಗೆ ₹400 ಮತ್ತು ದೋಣಿ ವಿಹಾರ ಶುಲ್ಕ ಭಾರತೀಯರಿಗೆ ₹70 ಹಾಗೂ ವಿದೇಶಿಯರಿಗೆ ₹400 ನಿಗದಿಪಡಿಸಲಾಗಿದೆ. ಕ್ಯಾಮೆರಾ ಶುಲ್ಕ, ವಿಶೇಷ ದೋಣಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದು ಪಕ್ಷಿಧಾಮದ ಸಿಬ್ಬಂದಿ ತಿಳಿಸಿದ್ದಾರೆ.