ಕೊಪ್ಪ: ಹೋಬಳಿಯ ಬೆಸಗರಹಳ್ಳಿಯಲ್ಲಿ ಪೌರ ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಸಾಧನಗಳನ್ನು ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಗುರುವಾರ ಕಂಡು ಬಂದಿದೆ.
ಇಲ್ಲಿನ ಪೌರ ಕಾರ್ಮಿಕರು ಕಸ ವಿಲೇವಾರಿ, ಚರಂಡಿ, ರಸ್ತೆ ಹಾಗೂ ಬೀದಿಗಳನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಗ್ಲೌಸ್, ಮಾಸ್ಕ್, ಬೂಟ್, ಸೇರಿದಂತೆ ಯಾವುದೇ ಸುರಕ್ಷತಾ ಸಾಧನೆಗಳನ್ನು ಬಳಸದೆ ಬರಿಗೈ ಮತ್ತು ಕಾಲಿನಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.
ಪೌರ ಕಾರ್ಮಿಕರೊಬ್ಬರು ಮಾತನಾಡಿ, ಸರಿಯಾಗಿ ಸುರಕ್ಷತಾ ಸಾಧನಗಳನ್ನು ಕೊಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಗ್ರಾ.ಪಂ ಹಾಗೂ ತಾ.ಪಂ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಂಡು ಪೌರ ಕಾರ್ಮಿಕರಿಗೆ ಸುರಕ್ಷಿತಾ ಸಾಧನಗಳನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪೌರ ಕಾರ್ಮಿಕರಿಗೆ ರಕ್ಷಣಾ ಸಾಧನಗಳನ್ನು ಪಂಚಾಯಿತಿ ವತಿಯಿಂದ ವಿತರಿಸಲಾಗಿದೆ. ರಕ್ಷಣಾ ಕವಚ ಬಳಸಿಕೊಂಡು ಸ್ವಚ್ಛತೆ ಮಾಡಲು ತಿಳಿಸಲಾಗಿದೆ ಎಂದು ಪಿಡಿಒ ಪ್ರಕಾಶ್ ಪ್ರಜಾವಾಣಿಗೆ ತಿಳಿಸಿದರು.