ನಾಗಮಂಗಲ: ‘ಜನರು ಸದೃಢರಾಗಬೇಕಾದರೆ ದೇಶದ ರೈತರು ಸಂಪೂರ್ಣ ಸದೃಢರಾಗಬೇಕು. ಆಗ ಮಾತ್ರವೇ ದೇಶದ ಏಳಿಗೆ ಸಾಧ್ಯವಾಗುತ್ತದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದ ಬಿ.ಜಿ.ಎಸ್ ಸಭಾಂಗಣದಲ್ಲಿ ಶುಕ್ರವಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ವರ್ಷದ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ರೈತ ಸಂಗಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಉದ್ಯೋಗದಲ್ಲಿ ಶೇ 70 ರಷ್ಟು ಇರುವ ರೈತರ ಕಡೆಗೆ ಗಮನಹರಿಸಬೇಕಾಗಿರುವುದು ಸರ್ಕಾರ ಮತ್ತು ಎಲ್ಲರ ಕರ್ತವ್ಯವಾಗಿದೆ. ಸ್ವಾಮೀಜಿ ಕೃಷಿ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸಿನಂತೆ ಆದಿಚುಂಚನಗಿರಿ ಸಂಸ್ಥೆಯಿಂದ ಕೃಷಿ ಕಾಲೇಜನ್ನು ಪ್ರಾರಂಭಿಸಲು ಸಿದ್ಧತೆ ನಡೆದಿದ್ದು, ಸರ್ಕಾರ ಕೈಜೋಡಿಸುತ್ತಿದೆ ಎಂದರು.
ಕೃಷಿ ಮೇಳದ ಯಶಸ್ಸಿನಿಂದ ಸಿರಿಧಾನ್ಯ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತಿದೆ. 50ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ರೈತರಿಗೆ ಮಾಹಿತಿ ನೀಡಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರು ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 3 ದಿನಗಳ ಸಿರಿಧಾನ್ಯ ಮೇಳ ಆಯೋಜಿಸಲಾಗಿತ್ತು. ₹150 ಕೋಟಿಗೂ ಹೆಚ್ಚು ಸಿರಿಧಾನ್ಯ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 50ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗವಹಿಸಿ, 300ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಲಕ್ಷಾಂತರ ಜನರಲ್ಲಿ ಸಾವಯವ ಆಹಾರ ಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಪೂರೈಕೆ ಮಾಡಿದರೆ ಲಾಭದಾಯಕವಾಗಲಿದೆ. ಸರ್ಕಾರ ರೈತರಿಗೆ ಜೊತೆಗೆ ಸರ್ಕಾರ ರೈತರಿಗೆ ತರಬೇತಿ , ಸಹಾಯ ಧನ, ನೀಡುತ್ತಿದ್ದು, ಬಜೆಟ್ನಲ್ಲೂ ಕೃಷಿಗೆ ಆದ್ಯತೆ ನೀಡಿದೆ ಎಂದರು.
ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಅನ್ನದಾನಿ ಮಠಕ್ಕೆ ಭಕ್ತರು ಮತ್ತು ರೈತರೇ ಮೂಲ. ರೈತರಿಗೆ ಜ್ಞಾನ ನೀಡದಿದ್ದರೆ ದೇಶವೇ ನರಳುತ್ತದೆ. ಮಣ್ಣನ್ನು ನಂಬಿರುವ ರೈತರನ್ನು ನಾವು ಕಳೆದುಕೊಳ್ಳಬಾರದು. ನಮ್ಮ ಜನಪದರು ಮತ್ತು ಪೂರ್ವಿಕರು ಮಣ್ಣಿಗೆ ಮಹತ್ವ ನೀಡಿ ಭೂತಾಯಿ ಎಂದು ಪೂಜಿಸುತ್ತಿದ್ದರು. ಭೂ ಗ್ರಹದ ರಕ್ಷಣೆಗೆ ಕ್ರಮವಹಿಸಬೇಕಿದೆ ಎಂದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ರಾಜ್ಯ ಕೃಷಿ ಆಯುಕ್ತಾಲಯದ ಆಯಕ್ತ ವೈ.ಎಸ್. ಪಾಟೀಲ್, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್. ಯತೀಶ್, ಜಿ.ಕೆ.ವಿ.ಕೆ ಕುಲಪತಿ ಎಸ್.ಬಿ.ಸುರೇಶ್, ಕೃಷಿ ಇಲಾಖೆ ನಿರ್ದೇಶಕ ಜಿ.ವಿ.ಪುತ್ರ, ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಚ್.ಪದ್ಮನಾಭ್, ವೈಭವ್, ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿಯರಾದ ಮಾಲತಿ, ಮಮತಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.