ಮದ್ದೂರು: ತಾಲ್ಲೂಕಿನ ಕೆ.ಹಾಗಲಹಳ್ಳಿ ಗ್ರಾಮದ ನಿವಾಸಿ ಕೃಷ್ಣ ಎಂಬುವರನ್ನು ಥಳಿಸಿ, ಅವರ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಹಾಗಲಹಳ್ಳಿ ಗ್ರಾಮದ ಮಧುಕುಮಾರ್, ಸುರೇಶ್, ಡಿ.ಹೊಸೂರು ಗ್ರಾಮದ ಸಂಜಯ್ ಹಾಗೂ ತಿಮ್ಮರಾಜು ಬಂಧಿತರು.
ಸಾಲ ವಾಪಸ್ ನೀಡುವಂತೆ ಕೇಳಲು ಹೋಗಿದ್ದ ಪಾಪೇಗೌಡ ಅವರ ಪತ್ನಿ ಶೋಭಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಕೃಷ್ಣ ಅವರನ್ನು ಗ್ರಾಮಸ್ಥರು ಥಳಿಸಿದ್ದರು. ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಹೀಗಾಗಿ, ಕೃಷ್ಣ ಅವರ ಕೊಲೆಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಬಂಧಿಸಿ, ಮದ್ದೂರಿನ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಈ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.