ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು 2004ರಲ್ಲಿ ಪಟ್ಟಣದಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಕಾರ್ಯಕ್ರಮದಲ್ಲಿ, ಗಂಜಾಂನಲ್ಲಿ ತಾವು ಕಳೆದ ತಮ್ಮ ಬಾಲ್ಯದ ದಿನಗಳನ್ನು ಅವರು ಮೆಲುಕು ಹಾಕಿದ್ದರು. ಕಾವೇರಿ ನದಿಯಲ್ಲಿ ಈಜಾಟ, ತೋಟಗಳಿಗೆ ನುಗ್ಗಿ ಸೀಬೆ, ಮಾವು, ಸಪೋಟ ತಿನ್ನುತ್ತಿದ್ದ ಪ್ರಸಂಗಗಳನ್ನು ಹಂಚಿಕೊಂಡಿದ್ದರು. ದೊಡ್ಡ ಗೋಸಾಯಿಘಾಟ್, ಚಿಕ್ಕ ಗೋಸಾಯಿಘಾಟ್, ಚಮನ್ ಬಯಲು ಪ್ರದೇಶಗಳಲ್ಲಿ ಅಡ್ಡಾಡಿದ ಕ್ಷಣಗಳನ್ನು ಜನರಿಗೆ ಕಥೆಯಂತೆ ವರ್ಣಿಸಿದ್ದರು.