ನಾಗಮಂಗಲ: ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನದ ಬಳಿಕ ಪ್ರಾರಂಭವಾದ ಧಾರಾಕಾರ ಮಳೆ, ಗಾಳಿಗೆ ಸೆಸ್ಕ್ ಕಚೇರಿಯ ಕಾಂಪೌಡ್ ಕುಸಿದಿದೆ. ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿದೆ.
ಸುಮಾರು ಎರಡು ಗಂಟೆ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಗ್ರಾಣದ ಕಾಂಪೌಂಡ್ ಕುಸಿದು ಬಿದ್ದಿದೆ.
ಸ್ಥಳಕ್ಕೆ ಸೆಸ್ಕ್ ಎಂಜಿನಿಯರ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಟ್ಟಣದ ಮೈಲಾರಾ ಪಟ್ಟಣದ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿದು ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹವಾಗಿ ಕೆರೆಯಂತಾಗಿ ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಯಿತು. ನಿರಂತರವಾಗಿ ಸುರಿದ ಮಳೆಯಿಂದ ಪಟ್ಟಣದ ವ್ಯಾಪ್ತಿಯ ಹಲವು ಅಂಗಡಿ ಮಳಿಗೆಗಳಿಗೂ ನೀರು ನುಗ್ಗಿ ಅಂಗಡಿ ಮಾಲೀಕರು ಪರದಾಡುವಂತಾಯಿತು.
ತಾಲ್ಲೂಕಿನ ಹೊಣಕೆರೆ, ಬೆಳ್ಳೂರು, ದೇವಾಲಾಪುರ, ಬಿಂಡಿಗನವಿಲೆ ಹೋಬಳಿ ವ್ಯಾಪ್ತಿಯಲ್ಲೂ ಮಳೆಯಾ ಗಿದ್ದು, ರಾಗಿ ಬಿತ್ತನೆ ಮಾಡಿ ಬೆಳೆ ಒಣ ಗುವ ಭೀತಿಯಲ್ಲಿದ್ದ ರೈತರಿಗೆ ಉತ್ತಮ ಮಳೆಯಿಂದ ನೆಮ್ಮದಿ ಉಂಟಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಕೆಲಗಂಟೆ ಕಾಲ ವಿದ್ಯುತ್ ಸ್ಥಗಿತವಾಗಿತ್ತು. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಂಜೆಯ ನಂತರವೂ ಮಳೆ ಮುಂದುವರಿದ ಕಾರಣ ವಿದ್ಯುತ್ ಸ್ಥಗಿತವಾಗಿತ್ತು.