ಮಂಡ್ಯ: ‘ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಆ.21ರಂದು ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಲಿದ್ದಾರೆ’ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಶನಿವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಗೌರಿ ಹಬ್ಬದ ಶುಭ ಸಂದರ್ಭದಂದು ಬಾಗಿನ ಅರ್ಪಿಸಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಆಡಂಬರದ ಸಮಾರಂಭ ಇರುವುದಿಲ್ಲ. ಕಾವೇರಿ ಮಾತೆ ಶಕ್ತಿ ತುಂಬಿದ್ದು ಮೈಸೂರು, ಬೆಂಗಳೂರು ಜನರಿಗೆ ಕುಡಿಯುವ ನೀರು, ರೈತರ ಕೃಷಿಗೆ ತೊಂದರೆ ಇರುವುದಿಲ್ಲ’ ಎಂದರು.
ಭರ್ತಿಯತ್ತ ಜಲಾಶಯ: ಭರ್ತಿಯತ್ತ ಸಾಗುತ್ತಿರುವ ಕೆಆರ್ಎಸ್ ಜಲಾಶಯ ಶನಿವಾರ ಸಂಜೆಯ ವೇಳೆಗೆ 124.50 ಅಡಿಗೆ ತಲುಪಿದೆ. ಗರಿಷ್ಠ ಮಟ್ಟ (124.80) ತಲುಪಲು 0.30 ಅಡಿ ಬಾಕಿ ಇದೆ. 8,838 ಕ್ಯುಸೆಕ್ ಒಳಹರಿವು, 5,317 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
‘ಜಿಲ್ಲಾಡಳಿತದ ನಿರ್ದೇಶನದಂತೆ ಬಾಗಿನ ಸಮಾರಂಭ ಆಯೋಜನೆ ಮಾಡಲಾಗುವುದು. ಕೋವಿಡ್ ಕಾರಣದಿಂದ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಮಾಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ವಿಜಯಕುಮಾರ್ ಹೇಳಿದರು.