ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ನಟಿ ಲೀಲಾವತಿ ಅವರ ಸಮಾಧಿಯ ಮೃತ್ತಿಕೆಯನ್ನು (ಮಣ್ಣು) ಶುಕ್ರವಾರ ಪುತ್ರ ವಿನೋದ್ರಾಜ್ ವಿಸರ್ಜಿಸಿದರು.
ಬಳಿಕ ಗಂಗೆ ಪೂಜೆ ಮಾಡುವ ವೇಳೆ ತಾಯಿಯನ್ನು ನೆನೆದು ಭಾವುಕರಾದರು. ಅವರ ಮನೆಯ ಸಾಕು ಪ್ರಾಣಿಗಳೂ ಆ ಕ್ಷಣಗಳಿಗೆ ಸಾಕ್ಷಿಯಾದವು. ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ್ ಶರ್ಮಾ ನೇತೃತ್ವದ ತಂಡ ಪಿಂಡ ಪ್ರದಾನದ ವಿಧಿವಿಧಾನಗಳನ್ನು ನಡೆಸಿಕೊಟ್ಟಿತು.
‘ಒಂದೂವರೆ ತಿಂಗಳ ಹಿಂದೆ, ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಚಳವಳಿಯಲ್ಲಿ ತಾಯಿ ಪಾಲ್ಗೊಂಡಿದ್ದರು. ಈಗ ಅದೇ ಕಾವೇರಿ ನೀರಿನಲ್ಲಿ ಅಮ್ಮನ ಮೃತ್ತಿಕೆಯನ್ನು ಇಷ್ಟು ಬೇಗ ವಿಸರ್ಜನೆ ಮಾಡುವ ಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ’ ಎಂದು ವಿನೋದ್ರಾಜ್ ಕಣ್ತುಂಬಿಕೊಂಡು ಹೇಳಿದರು.
‘ಕನ್ನಡ ಚಿತ್ರರಂಗದ ಸಾಕಷ್ಟು ಹಿರಿಯ ಜೀವಗಳನ್ನು ಕಳೆದುಕೊಂಡಿದ್ದೇವೆ. ನಮ್ಮನ್ನು ಅಗಲಿ ಹೋದವರನ್ನು ನೆನೆಸಿಕೊಂಡರೆ ಮನಸ್ಸಿಗೆ ನೋವಾಗುತ್ತದೆ. ಈಗ ಎಲ್ಲೆಡೆ ಕೊರೊನಾ ಸುದ್ದಿ ಹರಿದಾಡುತ್ತಿದೆ. ಅದರಿಂದ ಯಾರಿಗೂ ತೊಂದರೆ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.
ಕಾವೇರಿ ನದಿಯಲ್ಲಿ ಲೀಲಾವತಿ ಅವರ ಸಮಾಧಿಯ ಮೃತ್ತಿಕೆ ಮತ್ತು ಪಿಂಡ ವಿಸರ್ಜಿಸುವ ಮುನ್ನ ನದಿಯ ದಡದಲ್ಲಿಟ್ಟು ವಿನೋದರಾಜ್ ಪೂಜೆ ಸಲ್ಲಿಸಿದರು