ತೋಟದ ಮನೆಗೆ ನುಗ್ಗಿ ಮೇಕೆ ಮತ್ತು ಮಾಲೀಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸರೆ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ್ದ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿದ್ದಾರೆ.
ಗ್ರಾಮದ ನಿಂಗೇಗೌಡರ ತೋಟದ ಮನೆಗೆ ಬುಧವಾರ ತಡ ರಾತ್ರಿ ಚಿರತೆ ನುಗ್ಗಿತ್ತು. ಈ ವೇಳೆ ನಿಂಗೇಗೌಡ ಹಾಗೂ ಪತ್ನಿ ಮನೆಯಲ್ಲೇ ಮಲಗಿದ್ದರು. ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ದಾಳಿ ನಡೆಸಿದಾಗ ನಿಂಗೇಗೌಡ ಹಾಗೂ ಪತ್ನಿ ಉಪಾಯದಿಂದ ಹೊರ ಬರಲು ಯತ್ನಿಸಿದ್ದರು, ಈ ವೇಳೆ ಚಿರತೆ ಅವರ ಮೇಲೂ ದಾಳಿ ಮಾಡಿತ್ತು. ಅದರೂ ಅವರು ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾಗಿದ್ದರು.
ಹೊರಗೆ ಬಂದ ತಕ್ಷಣ ನಿಂಗೇಗೌಡರು ಮನೆಯ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದರು. ಘಟನೆಯಲ್ಲಿ ನಿಂಗೇಗೌಡರ ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿಗೂ ತರಚಿದ ಗಾಯಗಳಾಗಿವೆ.
ಮನೆಯೊಳಗಿದ್ದ 6 ಮೇಕೆಯಲ್ಲಿ ಒಂದನ್ನು ಚಿರತೆ ಕೊಂದು ಹಾಕಿದೆ. ಗುರುವಾರ ಮುಂಜಾನೆ ಮನೆ ಸುತ್ತಲೂ ಜನ ಸೇರಿಕೊಳ್ಳುತ್ತಿದ್ದಂತೆ ಬಂಧಿಯಾಗಿದ್ದ ಚಿರತೆ ಭಯದಿಂದ ಅಡಗಿ ಕುಳಿತಿತ್ತು.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬರುವ ಲಸಿಕೆ ಹಾರಿಸಿ ಚಿರತೆ ಸೆರೆ ಹಿಡಿದರು.
ಚಿರತೆ ಅಡಗಿ ಕುಳಿತಿದ್ದ, ಅರಣ್ಯ ಇಲಾಖೆ ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮಂಡ್ಯದ ಕೆ.ಆರ್.ಪೇಟೆಯ ಮೂಡನಹಳ್ಳಿಯ ತೋಟದ ಮನೆಯಲ್ಲಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು#Mandya #leeford pic.twitter.com/4b7w9ySTbP
— Prajavani (@prajavani) February 9, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.