ಮಂಡ್ಯ: ಹೊಂಬಾಳೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ತವರು ಜಿಲ್ಲೆಗೆ 50 ಐಸಿಯು ಹಾಸಿಗೆ ಹಾಗೂ 50 ಎಂಎಲ್ಪಿ ಸಾಮರ್ಥ್ಯದ 2 ಆಮ್ಲಜನಕ ಘಟಕ ಸ್ಥಾಪನೆಗೆ ಹಣಕಾಸು ನೆರವು ನೀಡಲು ಮುಂದಾಗಿದ್ದಾರೆ.
ಈ ಕುರಿತು ವಿಜಯ್ ಕಿರಗಂದೂರು ಜಿಲ್ಲಾಧಿಕಾರಿಗೆ ಇ–ಮೇಲ್ ಮಾಡಿದ್ದು ಹಣಕಾಸು ನೆರವು ಸ್ವೀಕರಿಸುವಂತೆ ಕೋರಿದ್ದಾರೆ.
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರವೇ ಎಲ್ಲಾ ರೀತಿಯ ನೆರವು ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸಮುದಾಯ ಕೂಡ ಒಗ್ಗಟ್ಟಿನಿಂದ ರೋಗಿಗಳ ಸೇವೆಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ₹ 1.5– ₹ 2 ಕೋಟಿ ಹಣಕಾಸು ನೆರವು ನೀಡುವುದಾಗಿ ತಿಳಿಸಿದ್ದಾರೆ.
ವಿಜಯ್ ಅವರು ಮಂಡ್ಯ ತಾಲ್ಲೂಕು ಕಿರಗಂದೂರು ಗ್ರಾಮದವರು. ಬೆಂಗಳೂರಿನಲ್ಲಿ ಹೊಂಬಾಳೆ ಸಂಸ್ಥೆ ಸ್ಥಾಪಿಸಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದ್ಧೂರಿ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ತವರು ಜಿಲ್ಲೆಯ ಅಭಿಮಾನದಿಂದಾಗಿ ಆರ್ಥಿಕ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
‘ವಿಜಯ್ ಕಿರಗಂದೂರು ಅವರು ನೀಡುತ್ತಿರುವ ನೆರವನ್ನು ಕೆಲವೇ ದಿನಗಳಲ್ಲಿ ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.