ಭಾರತೀನಗರ: ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಕಾಂಗ್ರೆಸ್ ‘ಗ್ಯಾರೆಂಟಿ’ಗಳು ಸುನಾಮಿಯಂತೆ ಅಪ್ಪಳಿಸಿ ಕಾಂಗ್ರೆಸ್ ಬಹುಮತ ಗಳಿಸಲು ಸಾಧ್ಯವಾಯಿತು ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಮಾಜಿ ಸಚಿವಅಂಬರೀಷ್ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬಿ ಸ್ಮಾರಕ ಬಳಗ, ಅಂಬಿ ಸರ್ಕಲ್ ಬಾಯ್ಸ್ರಿಂದ ಹಮ್ಮಿಕೊಳ್ಳಲಾಗಿದ್ದ ದಿವಂಗತ ಅಂಬರೀಷ್ ಜಯಂತಿ ಆಚರಣೆಯಲ್ಲಿ ಅಂಬಿ ಸಮಾಧಿಗೆ, ಪುತ್ಥಳಿಗೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಆಚರಣೆ ಬಳಿಕ ಅವರು ಸುದ್ದಿಗಾರರ ಜತೆ ನಂತರ ಮಾತನಾಡಿದರು.
5 ಗ್ಯಾರಂಟಿಗಳಿಂದ ಜನರು ಆಕರ್ಷಿತರಾಗಿದ್ದರು. ನಾವು ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಾಕಷ್ಟು ಪ್ರಯಸಿದ್ದೆವು. ಆದರೂ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದೆ. ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳ ಜಾರಿಗೆ ಸಮಯಾವಕಾಶ ಕೇಳಿದ್ದು ಅವಕಾಶ ಕೊಟ್ಟು ನೋಡೋಣ. ಒಂದು ವೇಳೆ ಜಾರಿಗೊಳಿಸದಿದ್ದರೆ ಜನರೇ ಅದಕ್ಕೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದರು.
ದೇವೇಗೌಡರ ಮಾತಿನಿಂದ ಖುಶಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತನಾಡಿದ್ದೆ. ಅದು ಖುಶಿ ಕೂಡ ತಂದಿದೆ. ದೇವೇಗೌಡರಿಗೆ ಅವರದ್ದೇ ಆದ ಗೌರವ, ಸ್ಥಾನ, ಮಾನ, ಇದೆ. ಹಾಗಾಗಿ ಅವರನ್ನು ಭೇಟಿಯಾಗಿ ಮಾತನಾಡಿದೆ. ಅವರೂ ನನನೊಂದಿಗೆ ಚೆನ್ನಾಗಿಯೇ ಮಾತನಾಡಿದರು ಎಂದು ಸುಮಲತಾ ತಿಳಿಸಿದರು.
ಮುಖಂಡರಾದ ಮದನ್, ಮಮತಾ ಶಂಕರೇಗೌಡ, ಅಂಬಿ ಸ್ಮಾರಕ ಬಳಗದ ಶಿವಕುಮಾರ್, ಕೇಬಲ್ಮಧು, ಪುಟ್ಟರಾಜು, ಪ್ರಸನ್ನ, ಅಂಬಿ ಕೃಷ್ಣ, ಅಂಬಿ ಸರ್ಕಲ್ ಬಾಯ್ಸ್ನ ಡಿ.ಸಿ.ಮಹೇಶ್, ಕೂಟು ಮಹೇಶ್, ಹುಚ್ಚಪ್ಪ ಮಹೇಶ, ಜೀವನ್ ಇದ್ದರು.
Highlights - ಮತದಾನದಲ್ಲಿ ಸುನಾಮಿಯಂತೆ ಅಪ್ಪಳಿಸಿದ ‘ಗ್ಯಾರೆಂಟಿ’ ಅಲೆ ಮುಂದಿನ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ
Cut-off box - ‘ಅಂಬಿಯನ್ನು ಮಿಸ್ ಮಾಡ್ತಿದ್ದಾರೆ’ ಅಂಬರೀಷ್ ಅವರನ್ನು ಅವರ ಅಭಿಮಾನಿಗಳು ರಾಜ್ಯದ ಜನತೆ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಂಬರೀಷ್ ಗಳಿಸಿದ ಆಸ್ತಿ ಅಭಿಮಾನಿಗಳು ಮಾತ್ರ. ಅದರಲ್ಲಿ ನಮಗೂ ಸ್ವಲ್ಪ ಉಳಿಸಿ ಹೋಗಿದ್ದಾರೆ. ಅದೇ ಸಮಾಧಾನಕರ ಸಂಗತಿ. ರಾಜ್ಯದ ಪ್ರತೀ ಮನೆಯಲ್ಲಿಯೂ ಅಂಬಿಯನ್ನು ಪ್ರೀತಿಸುವವರಿದ್ದಾರೆ. ಅದೇ ಶಾಶ್ವತವಾದ ಆಸ್ತಿ ಎಂದುಸುಮಲತಾ ಅಂಬರೀಷ್ ಹೇಳಿದರು.
Cut-off box - ‘ಒಳ ಒಪ್ಪಂದ ಮಾಡಿಲ್ಲ’ ಪಾಂಡವಪುರದಲ್ಲಿ ನಾನು ಬಿಜೆಪಿ ಪರ ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದೇನೆ. ಯಾರೊಂದಿಗೂ ಒಳ ಒಪ್ಪಂದ ಮಾಡಿರಲಿಲ್ಲ. ಪಾಂಡವಪುರದ ಬಿಜೆಪಿ ಅಭ್ಯರ್ಥಿ ನಾನು ಬೆಂಬಲ ಕೊಟ್ಟಿದ್ದರೂ ಕೊಡದಿದ್ದರೂ ಎಷ್ಟರ ಮಟ್ಟಿಗೆ ಗೆಲುವು ಸಾಧಿಸುವ ಅವಕಾಶವಿತ್ತು ಎಂಬ ನಿಜಾಂಶ ಬುದು ಅವರಿಗೂ ಗೊತ್ತಿತ್ತು. ನನ್ನಿಂದ ಸೋತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದರು. ಕಳೆದ 2018 ರಲ್ಲಿ ನಡೆದ ಚುನಾವಣೆಗಿಂತ ಈ ಭಾರಿ ಬಿಜೆಪಿಗೆ ಹೆಚ್ಚು ಮತಗಳು ಜಿಲ್ಲೆಯಲ್ಲಿ ಲಭ್ಯವಾಗಿವೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಯಕರೊಂದಿಗೆ ಭೇಟಿ ಮಾಡಿ ಚರ್ಚಿಸಿ ಪಕ್ಷ ಸಂಘಟನೆ ಬಗ್ಗೆ ನಿರ್ಣಯಿಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.