ಕೆ.ಆರ್.ಪೇಟೆ: ತಾಲ್ಲೂಕಿನ ಬಿ.ನಾಟನಹಳ್ಳಿಯ ಎರಡು ಕಡೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ 16 ಕೆ.ಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಗ್ರಾಮದ ಮಂಜೇಗೌಡ ಎಂಬುವವರ ಮನೆ ಹಿಂಭಾಗದ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಮಾಹಿತಿ ಮೇರೆಗೆ ಮಂಗಳವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದರು.
‘ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ ಮಂಜೇಗೌಡನನ್ನು ಹಿಡಿದು ವಿಚಾರಿಸಿದಾಗ ಹೊಲದಲ್ಲಿ 6 ಕೆ.ಜಿ 450 ಗ್ರಾಂ ಗಾಂಜಾ ಬೆಳೆದಿರುವುದು ಪತ್ತೆಯಾಯಿತು. ಅದೇ ಗ್ರಾಮದ ರಾಮೇಗೌಡ ಎಂಬುವವರ ಮನೆ ಹಿಂಭಾಗದ ಹೊಲದಲ್ಲಿ ಬೆಳೆದಿದ್ದ 9 ಕೆ.ಜಿ 800 ಗ್ರಾಂ ಹಸಿ ಗಾಂಜಾ ವಶಪಡೆಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ದಾಳಿ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಸಿಪಿಐ ಕೆ.ಎನ್.ಸುಧಾಕರ್, ಎಸ್ಐ ತೊಳಚನಾಯಕ್, ಸಿಬ್ಬಂದಿಗಳಾದ ಬಸಪ್ಪ, ಚಂದ್ರಶೇಖರ್, ಸುಜಾತಾ, ರೇವಣ್ಣ, ವೆಂಕಟೇಶ್, ಅನಿಲ್ ಕುಮಾರ್, ವಿರೂಪಾಕ್ಷ, ರವಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ನರೇಂದ್ರ, ಕಂದಾಯ ಅಧಿಕಾರಿ ರಾಜಮೂರ್ತಿ ಇದ್ದರು.