ಮಳವಳ್ಳಿ: ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ತಡೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ತಳಗವಾದಿ ಗ್ರಾಮಸ್ಥರು ದೇವಿಪುರ ಗ್ರಾಮದ ರಸ್ತೆಯನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ₹ 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಮತ್ತು ಚರಂಡಿ ನಿರ್ಮಿಸಲುವ ಕಾಮಗಾರಿಗೆ ಶಾಸಕ ಡಾ.ಕೆ.ಅನ್ನದಾನಿ ಇತ್ತೀಚೆಗೆ ಚಾಲನೆ ನೀಡಿದ್ದರು. ರಸ್ತೆಯ ಕೊನೆಯ ಭಾಗದ ಮರಿಗೌಡ ದಂಪತಿ ರಸ್ತೆಯ ಜಾಗ ನಮ್ಮದು ಎಂದು ಕಾಮಗಾರಿಗೆ ತಡೆ ನೀಡಲು ಯತ್ನಿಸಿ ಜೆಸಿಬಿ ಅಡ್ಡಲಾಗಿ ಮಲಗಿದ್ದರು. ಹೀಗಾಗಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು.
ಇದರಿಂದ ಬೇಸರಗೊಂಡ ನಿವಾಸಿಗಳು ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್.ಆನಂದ್ ನೇತೃತ್ವದಲ್ಲಿ ಟ್ರಾಕ್ಟರ್ ತಂದು ದೇವಿಪುರ ಗ್ರಾಮದ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾಹಿತಿ ತಿಳಿದ ಗ್ರಾಮಾಂತರ ಸಿಪಿಐ ಎ.ಕೆ.ರಾಜೇಶ್ ಪ್ರತಿಭಟನಕಾರರನ್ನು ಮನವೊಲಿಸಿ ಟ್ರಾಕ್ಟರ್ ತೆರವುಗೊಳಿಸಿದರು. ರಸ್ತೆ ಕಾಮಗಾರಿಯನ್ನು ಅಧಿಕಾರಿಗಳ ಜತೆ ಚರ್ಚಿಸಿ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸ್ವಾಮಿ, ಚಲುವ, ಹನುಮಂತ, ಚಿಕ್ಕಹನುಮಯ್ಯ, ಚೌಡೇಗೌಡ ಇದ್ದರು.