ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗ ಇರುವ ಶ್ರೀರಂಗನಾಥ ಕ್ರೀಡಾಂಗಣದ ಚಾವಣಿ ಸಂಪೂರ್ಣ ಹಾರಿ ಹೋಗಿದ್ದು, ಅದನ್ನು ಸರಿಪಡಿಸದ ಕಾರಣ ಅಭ್ಯಾಸ ನಡೆಸುವ ಕ್ರೀಡಾಪಟುಗಳು ಮಳೆ, ಬಿಸಿಲಿನ ತೊಂದರೆ ಅನುಭವಿಸುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಬಿರುಗಾಳಿಗೆ ಕ್ರೀಡಾಂಗಣದ ಚಾವಣಿ ಹಾರಿ ಹೋಗಿದೆ. ಇನ್ನಾದರೂ ಅದನ್ನು ಸರಿಪಡಿಸುವ ಪ್ರಯತ್ನ ನಡೆದಿಲ್ಲ. ಈ ಕ್ರೀಡಾಂಗಣಕ್ಕೆ ಪಟ್ಟಣ ಹಾಗೂ ಆಸುಪಾಸಿನ ಗ್ರಾಮಗಳ ನೂರಾರು ಕ್ರೀಡಾಪಟುಗಳು ಅಭ್ಯಾಸ ನಡೆಸಲು ಬರುತ್ತಿದ್ದು, ನೆರಳಿನ ವ್ಯವಸ್ಥೆ ಇಲ್ಲದೆ ಪಡಿಪಾಟಲು ಪಡುತ್ತಿದ್ದಾರೆ. ಜೋರು ಮಳೆ ಬಂದರೆ ಕ್ರೀಡಾಪಟುಗಳು ಕ್ರೀಡಾಂಗಣದ ಆಚೆ ಓಡುತ್ತಾರೆ. ಬಿಸಿಲು ಹೆಚ್ಚಾದರೆ ಕೂರಲು ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬವಣೆ ಪಡುತ್ತಿದ್ದಾರೆ.
‘ಕ್ರೀಡಾಂಗಣಕ್ಕೆ ಚಾವಣಿ ಹೊದಿಸು ವಂತೆ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ. ಆದರೆ, ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ. ಪಟ್ಟಣದಲ್ಲಿ ಬೇರೆ ಕ್ರೀಡಾಂಗಣ ಇಲ್ಲ. ಹಾಗಾಗಿ ಮಳೆ, ಗಾಳಿ, ಬಿಸಿಲಿನಲ್ಲಿ ಕ್ರೀಡಾಪಟುಗಳು ಬಸವಳಿಯುತ್ತಿದ್ದಾರೆ’ ಎಂದು ಕ್ರೀಡಾ ತರಬೇತುದಾರ ಡಾ.ಆರ್.ರಾಘವೇಂದ್ರ ಸಮಸ್ಯೆ ತೋಡಿಕೊಂಡಿದ್ದಾರೆ.
‘ಮುರಿದ ಕ್ರೀಡಾಂಗಣದಲ್ಲೇ ಸ್ವಾತಂತ್ರ್ಯೋತ್ಸವ ನಡೆಯುತ್ತದೆ. ಕ್ರೀಡಾಕೂಟಗಳು, ತರಬೇತಿಗಳು ನಿರಂತರವಾಗಿ ಜರುಗುತ್ತವೆ. ಆದರೂ ಮುರಿದ ಕ್ರೀಡಾಂಗಣದ ಚಾವಣಿ ಸರಿಪಡಿಸಲು ಯಾರೂ ಮನಸ್ಸು ಮಾಡುತ್ತಿಲ್ಲ. ಇಲ್ಲಿ ಶೌಚಾಲಯ, ಕುಡಿಯುವ ನೀರು ಕೂಡ ಇಲ್ಲ. ತಾಲ್ಲೂಕು ಕ್ರೀಡಾಂಗಣದ ದುರವಸ್ಥೆ ಯಿಂದ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಕ್ರೀಡಾಪಟುಗಳಾದ ರಂಜನ್, ಗಿರೀಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
₹ 50 ಲಕ್ಷ ಅನುದಾನಕ್ಕೆ ಮನವಿ
‘ಕ್ರೀಡಾಂಗಣ ಮುರಿದ ಚಾವಣಿ ಸರಿಪಡಿಸಲು ಶಾಸಕ ರವೀಂದ್ರ ಶ್ರೀಕಂಠಯ್ಯ ₹50 ಲಕ್ಷ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಅಂದಾಜು ಪಟ್ಟಿ ಸಿದ್ಧಪಡಿಸಲು ನಿರ್ಮಿತಿ ಕೇಂದ್ರಕ್ಕೆ ಸೂಚಿಸಲಾಗಿದೆ. ಕ್ರೀಡಾಂಗಣದ ಸಮಸ್ಯೆ ಕುರಿತು ಸಚಿವರ ಗಮನಕ್ಕೂ ತರಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.