ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣದ ಕತೆ ಹೇಳಿ ಶೂದ್ರರಿಗೆ ವಂಚನೆ: ರಂಗಕರ್ಮಿ ಎಚ್‌.ಜನಾರ್ದನ್‌ ಬೇಸರ

Last Updated 12 ಜುಲೈ 2021, 3:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಜೀವ ವಿರೋಧಿ ಕ್ರೌರ್ಯದ ಸಂಗತಿಗಳನ್ನು ವೈಭವೀ ಕರಿಸುವ ಪುರಾಣದ ಕತೆಗಳು ಮತ್ತು ದೇವರ ಹೆಸರಿನಲ್ಲಿ ಶೂದ್ರ ವರ್ಗದ ಜನರನ್ನು ಶತ ಶತಮಾನಗಳಿಂದ ವಂಚಿಸಲಾಗುತ್ತಿದೆ ಎಂದು ಹಿರಿಯ ರಂಗಕರ್ಮಿ ಎಚ್‌.ಜನಾರ್ದನ್‌ (ಜನ್ನಿ) ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಸಿದ್ದಲಿಂಗಯ್ಯ ಅವರು ತಮ್ಮ ಕವಿತೆಗಳ ಮೂಲಕ ಜಾಗೃತಿ ಮೂಡಿಸಿದರು. ಸಿದ್ದಲಿಂಗಯ್ಯ ಅವರದ್ದು ನೈಜ ಕಾವ್ಯ. ಅನ್ಯಾಯ, ಅಸಮಾನತೆ, ಜಾತೀಯತೆ, ಕ್ರೌರ್ಯ, ಮೌಢ್ಯ ಇರುವವರೆಗೆ ಸಿದ್ದಲಿಂಗಯ್ಯ ಜೀವಂತ ಇರುತ್ತಾರೆ ಎಂದರು.

ಅಂಬೇಡ್ಕರ್‌ ಚಿಂತನೆಗಳ ಮೂಸೆ ಯಲ್ಲಿ ಡಾ.ಸಿದ್ದಲಿಂಗಯ್ಯ ಅವರು ಕಾವ್ಯ ಚಳವಳಿ ಕಟ್ಟಿದರು. ಒಂದು ಕಾಲದಲ್ಲಿ ದಲಿತ ಚಳವಳಿ ವಿಧಾನಸೌಧವನ್ನೇ ನಡುಗಿಸುವಷ್ಟು ಗಟ್ಟಿಯಾಗಿತ್ತು. ಅದನ್ನು ಸಹಿಸದ ರಾಜಕಾರಣಿಗಳು ಈ ಸಮಾಜವನ್ನು ಎಡ, ಬಲ ಎಂದು ಒಡೆದು ಹೋಳು ಮಾಡಿದರು ಎಂದರು.

ಕಣ್ಣೀರೇ ಕಾವ್ಯವಾಯಿತು: ವಿಮ ರ್ಶಕ ಡಾ.ಎಸ್‌.ತುಕಾರಾಂ ಮಾತ ನಾಡಿ, ಡಾ.ಸಿದ್ದಲಿಂಗಯ್ಯ ಕಾವ್ಯದ ಮೂಲಕ ಜನರ ನೋವನ್ನು ಪರಿಣಾ ಮಕಾರಿಯಾಗಿ ತೋರಿಸಿದರು. 70ರ ದಶಕದಲ್ಲಿ ಬಡತನ ಮತ್ತು ಪ್ರತಿಭೆಯ ಸಂಗಮವಾಗಿದ್ದ ಸಿದ್ದಲಿಂಗಯ್ಯ ಅವರ ಸಾಹಿತ್ಯದಲ್ಲಿ ವರ್ತಮಾನದ ಸಂಕಟ ಗಳಿಗೆ ಪರಿಹಾರವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗುರುಪ್ರಸಾದ್‌ ಕೆರಗೋಡು, ಸಿದ್ದಲಿಂಗಯ್ಯ ಅವರ ಕಾವ್ಯದ ಆಶಯ ಈಡೇರಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌, ಗಾಂಧಿವಾದಿ ಡಾ.ಬಿ.ಸುಜಯಕುಮಾರ್‌, ಡಿವೈಎಸ್ಪಿ ಸಂದೇಶ್‌ಕುಮಾರ್‌ ಮಾತನಾಡಿದರು.

ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಅಧ್ಯಯನ ಪೀಠ ಮತ್ತು ಸ್ಮಾರಕ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದ್ದು, ಸಹಕರಿಸಬೇಕು ಎಂದು ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸ ಕೋರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ರಮಾ ಸಿದ್ದಲಿಂಗಯ್ಯ, ಗಂಜಾಂ ರವಿಚಂದ್ರ, ಕೆಎಎಸ್‌ ಅಧಿಕಾರಿ ಲಾಲಿಪಾಳ್ಯ ಶಿವಣ್ಣ, ಕುಬೇರಪ್ಪ, ಕ್ಯಾತನಹಳ್ಳಿ ಚಂದ್ರಣ್ಣ, ಪಾಂಡು, ವೀಣಾಕುಮಾರಿ, ಮಹದೇವಸ್ವಾಮಿ ಇದ್ದರು.

ಕಾವ್ಯ ನಮನ: ಡಾ.ಸಿದ್ದಲಿಂಗಯ್ಯ ಅವರಿಗೆ ಕವಿಗಳಾದ ಅನಾರ್ಕಲಿ ಸಲೀಂ, ಮಜ್ಜಿಗೆಪುರ ಶಿವರಾಂ, ಶರ್ಮಿಳಾ ಅಪ್ಪಾಜಿ, ವೇದವತಿ, ಪುಟ್ಟು ಬೆಳಗೊಳ, ಗಾನಸುಮಾ ಪಟ್ಟಸೋಮನಹಳ್ಳಿ ಇತರರು ಕಾವ್ಯ ನಮನ ಸಲ್ಲಿಸಿದರು. ಯರಹಳ್ಳಿ ಪುಟ್ಟಸ್ವಾಮಿ, ಹರಳಹಳ್ಳಿ ಗೋವಿಂದರಾಜು ಅವರಿಂದ ಗೀತ ನಮನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT