ಶ್ರೀರಂಗಪಟ್ಟಣ: ಸಂಕ್ರಾಂತಿಗೆ ವಿಶೇಷ ಕಾರ್ಯಕ್ರಮ

ಶ್ರೀರಂಗಪಟ್ಟಣ: ‘ಪಟ್ಟಣಕ್ಕೆ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಸಂಕ್ರಾಂತಿ ವೇಳೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಅಂಬಾರಿ ವಾಹನದಲ್ಲಿ ಕುಳಿತು ವಿವಿಧ ತಾಣ ವೀಕ್ಷಿಸಿ ಅವರು ಮಾತನಾಡಿದರು.
‘ಮೊದಲ ಹಂತವಾಗಿ ಪ್ರವಾಸಿಗರು ಐತಿಹಾಸಿಕ ಮತ್ತು ಪ್ರಾಕೃತಿಕ ತಾಣ ಗಳನ್ನು ಸುಲಭವಾಗಿ ವೀಕ್ಷಿಸಲು ಅನು ಕೂಲ ಆಗುವಂತೆ ಡಬಲ್ ಡೆಕ್ಕರ್ ವಾಹನ ಸಿದ್ಧಪಡಿಸಲಾಗಿದೆ. ಅಂಬಾರಿ ಎಂದು ಹೆಸರಿಡಲಾಗಿದೆ. ಶ್ರೀರಂಗ ಪಟ್ಟಣದಿಂದ ಈ ವಾಹನವನ್ನು ಪರಿ ಚಯಿಸಲಾಗುತ್ತಿದೆ’ ಎಂದು ತಿಳಿಸಿದರು.
‘27 ವರ್ಷಗಳಿಂದ ಚಲನಚಿತ್ರಗಳಲ್ಲಿ ನಟಿಸುತ್ತಿದ್ದು, 100ಕ್ಕೂ ಹೆಚ್ಚು ಚಿತ್ರಗಳು ಈ ಊರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿವೆ. ಹಾಗಾಗಿ ಈ ಸ್ಥಳದ ಮಹತ್ವ ಗೊತ್ತಿದೆ. ಇಲ್ಲಿ ವರ್ಷ ಪೂರ್ತಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಆಲೋಚನೆ ಇದೆ. ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ನಡೆದಿದೆ. ಈ ಊರಿನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕಾರ್ಯಕ್ರಮ ರೂಪಿಸ ಲಾಗುವುದು’ ಎಂದರು.
‘ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಜಿಲ್ಲೆಯವರಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವೂ ಇದೆ’ ಎಂದರು.
‘ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಖಾಲಿ ಬಿದ್ದಿರುವ ಪ್ರವಾಸೋದ್ಯಮ ಇಲಾಖೆಯ ಕಟ್ಟಡವನ್ನು ಬಳಕೆಗೆ ಯೋಗ್ಯವಾಗುವಂತೆ ಸಿದ್ಧಗೊಳಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಬಲ್ ಡೆಕ್ಕರ್ ಬಸ್ನಲ್ಲಿ ಕುಳಿತು ಆನೆಕೋಟೆ, ಶ್ರೀರಂಗನಾಥಸ್ವಾಮಿ ದೇಗುಲ, ಸೋಪಾನಕಟ್ಟೆ ಸ್ಥಳಗಳನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಜತೆಗೂಡಿ ವೀಕ್ಷಿಸಿದರು.
ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ವೇಣುಗೋಪಾಲ್, ಶ್ರೀನಿವಾಸ್, ಯೋಗೇಶ್, ಬಿಜೆಪಿ ಮುಖಂಡರಾದ ಟಿ.ಶ್ರೀಧರ್, ಎಸ್.ಕೆ.ಮಂಜುನಾಥ್, ಪುಟ್ಟರಾಮು, ಇಂದ್ರಕುಮಾರ್, ವಿದ್ಯಾ ಉಮೇಶ್ ಜತೆಗಿದ್ದರು.
ಚಂದ್ರವನದಲ್ಲಿ ಮಡಿಲಕ್ಕಿ: ಶೃತಿ ಅವರು ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರಿಂದ ಸನ್ಮಾನ ಮತ್ತು ಮಡಿಲಕ್ಕಿ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ವಾಮೀಜಿ ಜತೆ ಪ್ರವಾ ಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಆಶ್ರಮದ ಕಾರ್ಯದರ್ಶಿ ಟ.ಪಿ.ಶಿವಕುಮಾರ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.