ಮಂಡ್ಯ: ಮೈಸೂರು– ಮೈಲಾಡುತುರೈ ಎಕ್ಸ್ಪ್ರೆಸ್ ರೈಲಿನಲ್ಲಿ ಸೋಮವಾರ ಸಂಸದೆ ಎ.ಸುಮಲತಾ ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಮೊದಲೇ ಟಿಕೆಟ್ ಬುಕ್ ಮಾಡಿದ್ದ ಅವರು ಹವಾ ನಿಯಂತ್ರಿತ ಬೋಗಿಯಲ್ಲಿ ಬೆಂಬಲಿಗರಾದ ರಾಕ್ಲೈನ್ ವೆಂಕಟೇಶ್, ಇಂಡುವಾಳು ಸಚ್ಚಿದಾನಂದ ಅವರೊಂದಿಗೆ ತೆರಳಿದರು. ಸಂಜೆ 4.45ಕ್ಕೆ ನಿಲ್ದಾಣಕ್ಕೆ ಬಂದರು, 4.58ಕ್ಕೆ ರೈಲು ಹೊರಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ‘ಪ್ರಯಾಣಿಕರ ಸಮಸ್ಯೆ ಅರ್ಥ ಮಾಡಿಕೊಳ್ಳಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಇದರಿಂದ ಸಂಸತ್ನಲ್ಲಿ ಮಾತನಾಡಲು ಅನುಕೂಲವಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರತ್ಯೇಕ ಮಹಿಳಾ ರೈಲು ಓಡಿಸುವಂತೆ ಒತ್ತಾಯಿಸಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಹೇಳಿದರು.